ಹೊಸಪೇಟೆ: ‘ಸ್ವಚ್ಛತೆಯೇ ಸೇವೆ’ ಅಭಿಯಾನಕ್ಕೆ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಚಾಲನೆ ನೀಡಲಾಯಿತು.
ವಿಶ್ವವಿದ್ಯಾಲಯದ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಅಭಿಯಾನದಲ್ಲಿ ಭಾಗವಹಿಸಿ, ಸ್ವಚ್ಛತಾ ಕಾರ್ಯ ಕೈಗೊಂಡರು.
ಅಭಿಯಾನ ಉದ್ಘಾಟಿಸಿದ ಕುಲಸಚಿವ ಎ. ಸುಬ್ಬಣ್ಣ ರೈ, ‘ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಮಹತ್ವಕಾಂಕ್ಷಿ ಯೋಜನೆ ಇದಾಗಿದೆ. ಸೆ. 11ರಿಂದ ಅ. 27ರ ವರೆಗೆ ಈ ಅಭಿಯಾನ ನಡೆಯಲಿದೆ. ಆದರೆ, ವರ್ಷಪೂರ್ತಿ ಇದು ನಡೆಯಬೇಕು. ಒಂದು ತಿಂಗಳಿಗಷ್ಟೇ ಸೀಮಿತರಾಗಬಾರದು’ ಎಂದು ಹೇಳಿದರು.
‘ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿ ಇಡುವುದು ಪ್ರತಿಯೊಬ್ಬರ ಜವಾಬ್ದಾರಿ. ಹಾಗೆ ಮಾಡಿದರೆ ಎಲ್ಲರೂ ಆರೋಗ್ಯವಂತರಾಗಿ ಇರಬಹುದು. ಪ್ಲಾಸ್ಟಿಕ್ ವಸ್ತುಗಳ ಬಳಕೆ ಕೈಬಿಡಬೇಕು. ಅದರ ಬಳಕೆಯಿಂದ ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಆಗುತ್ತಿವೆ’ ಎಂದು ತಿಳಿಸಿದರು.
ಅಧ್ಯಯನಾಂಗದ ನಿರ್ದೇಶಕ ಹೆಬ್ಬಾಲೆ ಕೆ. ನಾಗೇಶ್, ಸಮಾಜ ವಿಜ್ಞಾನ ನಿಕಾಯದ ಡೀನ್ ಕೆ. ಕೇಶವನ್ ಪ್ರಸಾದ್, ರೂಸಾ ಕಮಿಟಿ ಸಂಯೋಜನಾಧಿಕಾರಿ ಸಿ.ಟಿ. ಗುರುಪ್ರಸಾದ್, ಪ್ರಸಾರಾಂಗದ ನಿರ್ದೇಶಕ ಎಚ್.ಡಿ. ಪ್ರಶಾಂತ, ಉಪಕುಲಸಚಿವ ಎ.ವೆಂಕಟೇಶ, ಸಹಾಯಕ ಕುಲಸಚಿವ ಬಿ.ಗುರುಬಸಪ್ಪ, ಹಿರಿಯ ಪ್ರಾಧ್ಯಾಪಕಿ ಸಿದ್ದಗಂಗಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.