ADVERTISEMENT

ಎದುರಾಳಿಗಳಾದ ಉಗ್ರಪ್ಪ–ಶಾಂತಾ; ಬಳ್ಲಾರಿ ಜಿಲ್ಲೆಯಲ್ಲಿ ಹರಡಿತು ಉಪಚುನಾವಣೆ ಹವಾ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 14:05 IST
Last Updated 16 ಅಕ್ಟೋಬರ್ 2018, 14:05 IST
ನಾಮಪತ್ರ ಸಲ್ಲಿಸುವ ಮುನ್ನ ನಡೆದ ತೆರೆದ ವಾಹನದ ಮೆರವಣಿಗೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಅವರೊಂದಿಗೆ ಶಾಸಕ ಈ.ತುಕಾರಂ, ರಾಜ್ಯ ಸಭೆ ಸದಸ್ಯ ನಾಸಿರ್‌ ಹುಸೇನ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌.
ನಾಮಪತ್ರ ಸಲ್ಲಿಸುವ ಮುನ್ನ ನಡೆದ ತೆರೆದ ವಾಹನದ ಮೆರವಣಿಗೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಅವರೊಂದಿಗೆ ಶಾಸಕ ಈ.ತುಕಾರಂ, ರಾಜ್ಯ ಸಭೆ ಸದಸ್ಯ ನಾಸಿರ್‌ ಹುಸೇನ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌.   

ಬಳ್ಳಾರಿ: ಲೋಕಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಮಂಗಳವಾರ ಬಿಜೆಪಿ ಅಭ್ಯರ್ಥಿಯಾಗಿ ಜೆ.ಶಾಂತಾ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ವಿ.ಎಸ್‌.ಉಗ್ರಪ್ಪ ನಾಮಪತ್ರ ಸಲ್ಲಿಸಿ ಎದುರಾಳಿಗಳಾದರು. ಅವರೊಂದಿಗೆ, ಮೊಳಕಾಲ್ಮೂರಿನ ತಿಪ್ಪೇಸ್ವಾಮಿ ಕೂಡ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದು ವಿಶೇಷ.

ನಗರದ ಎಸ್ಪಿ ವೃತ್ತದಲ್ಲಿರುವ ಬಿಜೆಪಿ ಕಚೇರಿಯಿಂದ ಶಾಂತಾ ಅವರ ಮೆರವಣಿಗೆ ಹಾಗೂ ದುರ್ಗಮ್ಮ ಗುಡಿ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆದ ಪರಿಣಾಮ ಸುತ್ತಮುತ್ತಲಿನ ಎಲ್ಲ ರಸ್ತೆಗಳಲ್ಲೂ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ದುರ್ಗಮ್ಮ ಗುಡಿಯಲ್ಲಿ ಈ ಎರಡೂ ಪಕ್ಷಗಳ ಮುಖಂಡರು ಪೂಜೆ ಸಲ್ಲಿಸಿದ ಪರಿಣಾಮವಾಗಿ ಅಲ್ಲಿಯೂ ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಭಕ್ತರಿಗೆ ಅಡಚಣೆ ಉಂಟಾಗಿತ್ತು.

ADVERTISEMENT

ಕಾಂಗ್ರೆಸ್‌ ಮೆರವಣಿಗೆಯಲ್ಲಿ ಪಾಲ್ಗೊಂಡ ಕಾರ್ಯಕರ್ತರು ವಿಜಯನಗರ ಶಾಸಕ ಆನಂದ್‌ಸಿಂಗ್‌ ಅವರ ಮುಖಚಿತ್ರವುಳ್ಳ ಬ್ಯಾನರ್‌ಗಳನ್ನು ಪ್ರದರ್ಶಿಸಿದರು. ಎನ್‌ಎಸ್‌ಯುಐ ಬಾವುಟಗಳೂ ರಾರಾಜಿಸಿದವು.

ನೂಕುನುಗ್ಗಲು:
ಕೊನೆಯ ದಿನವಾದ ಪರಿಣಾಮ ಮತ್ತು ಎರಡೂ ಪಕ್ಷಗಳ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ನೆರೆದಿದ್ದರಿಂದ ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಆವರಣದಲ್ಲೂ ನೂಕುನುಗ್ಗಲು ಏರ್ಪಟ್ಟಿತ್ತು.

ಕಚೇರಿಯ ಮುಖ್ಯಗೇಟ್‌ನ ಬಳಿ ನಿಂತಿದ್ದ ಹತ್ತಾರು ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಮಾಡಿದರು. ಅದೇ ರೀತಿಯ ಸನ್ನಿವೇಶ ಜಿಲ್ಲಾ ಚುನಾವಣಾಧಿಕಾರಿ ಕೊಠಡಿಯ ಹೊರಗೂ ಏರ್ಪಟ್ಟಿತ್ತು. ಕೊಠಡಿಯ ಹೊರಗೆ, ಸಭಾಂಗಣದ ಪಡಸಾಲೆ, ಆಪ್ತಶಾಖೆಯ ಸುತ್ತಲೂ ಜನ ನೆರೆದಿದ್ದರು.

ಬೆಂಗಳೂರಿನಿಂದಲೂ ಪತ್ರಕರ್ತರು ಬಂದಿದ್ದರಿಂದ ಫೋಟೋ, ವೀಡಿಯೋ ತೆಗೆಯಲೂ ನೂಕುನುಗ್ಗಲು ಏರ್ಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.