ADVERTISEMENT

ಉಗ್ರಪ್ಪ ಜಯಭೇರಿ; ಕಾಂಗ್ರೆಸ್‌, ಜೆಡಿಎಸ್‌ ವಿಜಯೋತ್ಸವ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 11:31 IST
Last Updated 7 ನವೆಂಬರ್ 2018, 11:31 IST
ವಿ.ಎಸ್‌. ಉಗ್ರಪ್ಪನವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ಹೊಸಪೇಟೆಯಲ್ಲಿ ವಿಜಯೋತ್ಸವ ರ್‍ಯಾಲಿ ನಡೆಸಿದರು
ವಿ.ಎಸ್‌. ಉಗ್ರಪ್ಪನವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಕಾಂಗ್ರೆಸ್‌ ಕಾರ್ಯಕರ್ತರು ಮಂಗಳವಾರ ಹೊಸಪೇಟೆಯಲ್ಲಿ ವಿಜಯೋತ್ಸವ ರ್‍ಯಾಲಿ ನಡೆಸಿದರು   

ಹೊಸಪೇಟೆ: ಬಳ್ಳಾರಿ ಲೋಕಸಭೆ ಉಪಚುನಾವಣೆಯಲ್ಲಿ ವಿ.ಎಸ್‌. ಉಗ್ರಪ್ಪನವರು ಜಯಭೇರಿ ಬಾರಿಸಿದ್ದರಿಂದ ಕಾಂಗ್ರೆಸ್‌ ಹಾಗೂ ಜೆ.ಡಿ.ಎಸ್‌. ಕಾರ್ಯಕರ್ತರು ಮಂಗಳವಾರ ನಗರದಲ್ಲಿ ವಿಜಯೋತ್ಸವ ಆಚರಿಸಿದರು.

ಎರಡೂ ಪಕ್ಷಗಳ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ರ್‍ಯಾಲಿ ನಡೆಸಿದರು. ನಂತರ ರೋಟರಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿಕೊಂಡು ವಿಜಯೋತ್ಸವ ಆಚರಿಸಿದರು. ‘ಉಗ್ರಪ್ಪನವರಿಗೆ ಜಯವಾಗಲಿ’, ‘ಸಿದ್ದರಾಮಯ್ಯನವರಿಗೆ ಜಯವಾಗಲಿ’, ‘ದೋಸ್ತಿ ಸರ್ಕಾರಕ್ಕೆ ಜಯವಾಗಲಿ’ ಎಂದು ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್‌ ಪಕ್ಷದ ನೇತೃತ್ವವನ್ನು ಸಂದೀಪ್‌ ಸಿಂಗ್‌ ವಹಿಸಿದರೆ, ದೀಪಕ್‌ ಕುಮಾರ್‌ ಸಿಂಗ್‌ ನೇತೃತ್ವದಲ್ಲಿ ಜೆ.ಡಿ.ಎಸ್‌. ಕಾರ್ಯಕರ್ತರು ವಿಜಯೋತ್ಸವ ಆಚರಿಸಿ, ಸಂಭ್ರಮಿಸಿದರು.

ADVERTISEMENT

ದೀಪಕ್‌ ಕುಮಾರ್‌ ಸಿಂಗ್‌ ಮಾತನಾಡಿ, ‘ಕಾಂಗ್ರೆಸ್‌ ಹಾಗೂ ಜೆ.ಡಿ.ಎಸ್‌. ಕಾರ್ಯಕರ್ತರ ಪರಿಶ್ರಮದಿಂದ ಉಗ್ರಪ್ಪನವರು ಹೆಚ್ಚಿನ ಮತಗಳ ಅಂತರದಿಂದ ಜಯ ಗಳಿಸಿ, ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದ ಕೈಗಳನ್ನು ಜನತೆ ಬಲಪಡಿಸಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲೂ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಸ್ಪರ್ಧಿಸಿದರೆ ಉತ್ತಮ ಸಾಧನೆ ಮಾಡಬಹುದು’ ಎಂದು ಹೇಳಿದರು.

ಕಾಂಗ್ರೆಸ್‌ ಹಾಗೂ ಜೆ.ಡಿ.ಎಸ್‌. ಪಕ್ಷದ ಧ್ವಜಗಳು, ಹಸ್ತದ ಚಿಹ್ನೆಗಳನ್ನು ಹಿಡಿದುಕೊಂಡು ಕಾರ್ಯಕರ್ತರು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.