ಹೊಸಪೇಟೆ: ‘ತಾಲ್ಲೂಕಿನ ಕಾಕುಬಾಳ ಸುತ್ತಮುತ್ತ ಚಿರತೆಗಳ ಉಪಟಳ ಹೆಚ್ಚಾಗಿದ್ದು, ಅವುಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ತಾಲ್ಲೂಕು ಕುರಿಗಾರರ ಹಿತರಕ್ಷಣಾ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಸಂಬಂಧ ಸಮಿತಿಯ ಪದಾಧಿಕಾರಿಗಳು ಗುರುವಾರ ವಲಯ ಅರಣ್ಯ ಅಧಿಕಾರಿ ಎನ್. ಬಸವರಾಜು ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದರು.
‘ಚಿರತೆಗಳು ಹಗಲು ರಾತ್ರಿಯೆನ್ನದೆ ಕುರಿ, ನಾಯಿಗಳ ಮೇಲೆ ದಾಳಿ ನಡೆಸುತ್ತಿವೆ. ಇತ್ತೀಚೆಗೆ ಎರಡೋಣಿ ಈರಣ್ಣ ಎಂಬುವರ ಹೊಲದ ಮೇಲೆ ದಾಳಿ ನಡೆಸಿದ ಚಿರತೆಗಳು, ಕುರಿಗಳನ್ನು ಸಾಯಿಸಿವೆ. ಕುರಿಗಳ ಪಕ್ಕದಲ್ಲಿಯೇ ಮಕ್ಕಳು ಮಲಗಿದ್ದರು. ಸೋಮಲಾಪುರದಲ್ಲಿ ಬಾಲಕನನ್ನು ಸಾಯಿಸಿದ ಘಟನೆ ಮತ್ತೆ ಕರುಕಳಿಸಬಾರದು. ಅನಾಹುತ ಸಂಭವಿಸುವ ಮೊದಲು ಅರಣ್ಯ ಇಲಾಖೆಯು ಕಾಕುಬಾಳು ಗ್ರಾಮದ ಕೆಂಚನಕಲ್ಲು ಪ್ರದೇಶದಲ್ಲಿ ಬೋನು ಇರಿಸಿ, ಚಿರತೆ ಸೆರೆ ಹಿಡಿಯಬೇಕು’ ಎಂದು ಆಗ್ರಹಿಸಿದರು.
ಸಮಿತಿಯ ಸಂಚಾಲಕ ಆರ್. ಕೊಟ್ರೇಶ್, ಎರ್ರಿಸ್ವಾಮಿ, ಪ್ರಕಾಶ್ ಕಾಕುಬಾಳು, ಎರಡೋಣಿ ಈರಣ್ಣ, ವಕೀಲರಾದ ಎಲ್.ಎಸ್. ಆನಂದ, ದಮ್ಮೂರ್ ರಾಘವೇಂದ್ರ, ತಾರಿಹಳ್ಳಿ ಜಂಬಯ್ಯ, ಸೊಂಟಿ ಅಯ್ಯಪ್ಪ ಮನವಿಗೆ ಸಹಿ ಹಾಕಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.