ADVERTISEMENT

ತೆಕ್ಕಲಕೋಟೆ | ಜೋಳ ಖರೀದಿಯಲ್ಲಿ ಅವ್ಯವಹಾರ: ಮಧ್ಯವರ್ತಿಗಳಿಗೆ ಅಧಿಕಾರಿಗಳ ಸಾಥ್

ರೈತರ ಎಫ್ಐಡಿ ಬಳಸಿ 5424 ಕ್ವಿಂಟಾಲ್ ಜೋಳ ಮಾರಾಟ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:21 IST
Last Updated 16 ಜುಲೈ 2025, 5:21 IST
ಸಿರುಗುಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ
ಸಿರುಗುಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ   

ತೆಕ್ಕಲಕೋಟೆ: 2024-25ನೇ ಸಾಲಿನ ಹಿಂಗಾರು ಜೋಳ ಖರೀದಿಯಲ್ಲಿ ಸಿರುಗುಪ್ಪ ತಾಲ್ಲೂಕಿನಲ್ಲಿ ನೂರಾರು ರೈತರ ಫ್ರೂಟ್ಸ್ ಐಡಿ ಬಳಸಿ ಒಂದೇ ಮೊಬೈಲ್ ನಂಬರ್‌ನಿಂದ ನೋಂದಣಿ ಮಾಡಿ ಜೋಳ ಮಾರಾಟ ಮಾಡಿರುವುದು ಬಯಲಾಗಿದೆ. 

ಮಧ್ಯವರ್ತಿ ಸುರೇಶ ಹಾಗೂ ಖರೀದಿ ಕೇಂದ್ರದ ನೋಂದಣಾಧಿಕಾರಿ ಮೋಹನ್ ಕುಮಾರ ಈ ಅವ್ಯವಹಾರದ ರೂವಾರಿಗಳಾಗಿದ್ದು, ಅವರ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇವರ ಜತೆಗೆ, ಅಧಿಕಾರಿ ಹಾಗೂ ಪ್ರಭಾವಿ ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ಮಧ್ಯವರ್ತಿ ಸುರೇಶ 36 ರೈತರ ಎಫ್ಐಡಿ ಬಳಸಿ 1424 ಕ್ವಿಂಟಾಲ್ ಹಾಗೂ ಮತ್ತೆರಡು ನಂಬರ್ ಬಳಸಿ 72 ರೈತರ 4000 ಕ್ವಿಂಟಾಲ್ ಜೋಳವನ್ನು ಅಕ್ರಮವಾಗಿ ನೋಂದಣಿ ಮಾಡಿಸಿ ಮಾರಾಟ ಮಾಡಿದ್ದಾನೆ.

ADVERTISEMENT

ಜೋಳ ಖರೀದಿ ನಡೆಯುತ್ತಿದ್ದ ಅಕ್ರಮದ ಕುರಿತು ಮಾರ್ಚ್ ತಿಂಗಳಲ್ಲಿ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ದೂರು ಸಲ್ಲಿಸಿದ್ದರು. ತಕ್ಷಣವೇ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗಿದ್ದಲ್ಲಿ, ಮಧ್ಯವರ್ತಿಗಳು ಖರೀದಿಸಿದ್ದ ಜೋಳ ವಶಕ್ಕೆ ಪಡೆದು ತಪ್ಪಿತಸ್ಥರನ್ನು ಬಂಧಿಸಬಹುದಿತ್ತು ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿ ತಿಳಿಸಿದ್ದಾರೆ.

ಆದರೆ ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಮಧ್ಯವರ್ತಿಯು ಜಾಮೀನು ಪಡೆದು ರಾಜಾರೋಷವಾಗಿ ಒಡಾಡಿಕೊಂಡಿದ್ದು, ನೋಂದಣಾಧಿಕಾರಿ ಮೋಹನ್ ಕುಮಾರ ತಲೆಮರೆಸಿಕೊಂಡಿದ್ದಾನೆ.

ಈ ಕುರಿತು ಪ್ರತಿಕ್ರಿಯೆಗೆ ಸಿರುಗುಪ್ಪ ಆಹಾರ ನಿರೀಕ್ಷಕ ಮಹಾರುದ್ರಗೌಡ ಅವರನ್ನು ಸಂಪರ್ಕಿಸಿದಾಗ ‘ದೂರು ದಾಖಲಿಸುವ ಸಂದರ್ಭದಲ್ಲಿ ನಾನು ರಜೆಯಲ್ಲಿದ್ದೆ. ಆದ್ದರಿಂದ ಹೆಚ್ಚಿನ ಮಾಹಿತಿ ಇಲ್ಲ’ ಎಂದಷ್ಟೇ ಹೇಳಿದರು.

ತಾಲ್ಲೂಕಿನ ಹಚ್ಚೊಳ್ಳಿ, ಸಿರುಗುಪ್ಪ ಹಾಗೂ ಕರೂರು ಹೋಬಳಿ ಸೇರಿದಂತೆ 10 ಖರೀದಿ ಕೇಂದ್ರಗಳಲ್ಲಿ ಜೋಳ ಬೆಳೆದ 2046 ರೈತರು ನೊಂದಣಿ ಮಾಡಿಕೊಂಡಿದ್ದರು. ಇವುಗಳಲ್ಲಿ ಕರೂರು ಹೋಬಳಿ ವ್ಯಾಪ್ತಿಯ ಉತ್ತನೂರು ಗ್ರಾಮದ ರೈತರ ಬಹುತೇಕ ಎಫ್‌ಐಡಿಗಳು ಒಂದೇ ಮೊಬೈಲ್ ನಂಬರ್‌ನಿಂದ ನೋಂದಾಯಿಸಿಕೊಂಡಿದ್ದು ಆಹಾರ ನಿರೀಕ್ಷಕ ಎಂ. ವಿಜಯ್ ಕುಮಾರ್ ಸಿರಿಗೇರಿ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಅದೇ ದೂರನ್ನು ಹೆಚ್ಚಿನ ತನಿಖೆಗಾಗಿ ಸಿರುಗುಪ್ಪ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಹಾರ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದು, ದೂರಿನನ್ವಯ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಿರುಗುಪ್ಪ ಡಿವೈಎಸ್‌ಪಿ ಸಂತೋಷ ಚೌಹಾಣ್ ಹೇಳಿದ್ದಾರೆ.  

ಆಂಧ್ರದ ಬಿತ್ತನೆಜೋಳ ಖರೀದಿ

ಕೇಂದ್ರದಲ್ಲಿ ಮಾರಾಟ ಜೋಳ ಖರೀದಿ ಹಾಗೂ ಮಾರಾಟದ ವ್ಯವಸ್ಥಿತ ಪಿತೂರಿಗೆ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿ ತಿಳಿಸಿದ್ದಾರೆ.  ಮೇವಿಗಾಗಿ ಬಿಹಾರಕ್ಕೆ ಕಳುಹಿಸುವ ಬೀಜ ಹಾಗೂ ಸೀಮಾಂಧ್ರದ ಬಿತ್ತನೆ ಜೋಳವನ್ನು  ಮಧ್ಯವರ್ತಿಗಳು ₹1800 ರಿಂದ ₹2000ಕ್ಕೆ ಖರೀದಿಸಿ ಅದನ್ನೇ ಖರೀದಿ ಕೇಂದ್ರದಲ್ಲಿ ₹3371ಕ್ಕೆ ಮಾರಾಟ ಮಾಡುತ್ತಾರೆ. ಇದಕ್ಕೆ ರೈತರ ಎಫ್‌ಐಡಿ ಬಳಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.