ADVERTISEMENT

ಲಾರಿ ಗುದ್ದಿಸಿ ಮೂವರ ಸಾವು: ಚಾಲಕನಿಗೆ 11 ತಿಂಗಳು ಸಜೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 13:31 IST
Last Updated 15 ಫೆಬ್ರುವರಿ 2021, 13:31 IST

ವಿಜಯನಗರ (ಹೊಸಪೇಟೆ): ಅತಿವೇಗ, ಅಜಾಗರೂಕತೆಯಿಂದ ಲಾರಿ ಓಡಿಸಿ ಮೂವರ ಸಾವಿಗೆ ಕಾರಣನಾದ ನಗರದ ಉಕ್ಕಡಕೇರಿ ನಿವಾಸಿ ರುದ್ರಪ್ಪ ತಿಪ್ಪಣ್ಣ ಎನ್ನುವವರಿಗೆ ಸ್ಥಳೀಯ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ತೃಪ್ತಿ ಧರಣಿ ಅವರು 11 ತಿಂಗಳು ಸಾದಾ ಶಿಕ್ಷೆ ವಿಧಿಸಿ ಸೋಮವಾರ ಆದೇಶ ನೀಡಿದ್ದಾರೆ.

ಶಿಕ್ಷೆಯೊಂದಿಗೆ ₹7,500 ದಂಡ, ನೊಂದ ಫಕೀರಮ್ಮ, ಮಂಜುಳಾ ಅವರಿಗೆ ತಲಾ ಎರಡು ಸಾವಿರ ಪರಿಹಾರ ನೀಡುವಂತೆಯೂ ಆದೇಶ ಮಾಡಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಗೀತಾ ಎಸ್‌. ಮಿರಜಕರ ವಾದ ಮಂಡಿಸಿದ್ದಾರೆ.

ಆಗಿದ್ದೇನು?:

ADVERTISEMENT

2013ರ ಡಿಸೆಂಬರ್‌ 6ರಂದು ರುದ್ರಪ್ಪ ಅತಿ ವೇಗದಿಂದ ಲಾರಿ ತಂದು ನಗರದ ಬಳ್ಳಾರಿ ರಸ್ತೆ ಬದಿ ನಿಂತಿದ್ದ ಆಟೊ, ಮೊಪೇಡ್‌ ವಾಹನಕ್ಕೆ ಗುದ್ದಿದ್ದಾನೆ. ನಂತರ ವೇಗದಲ್ಲಿ ಲಾರಿ ಅಲ್ಲಿಯೇ ನಿಂತಿದ್ದ ಫಕೀರಮ್ಮ, ಮಂಜುಳಾ, ಅವರ ಮಗ ನಂದೀಶ, ಸುಮಿತ್ರಾ ಹಾಗೂ ಸರಸ್ವತಿ ಅವರಿಗೆ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಅದೇ ದಿನ ಸಂಜೆ ಸುಮಿತ್ರಾ ಮೃತಪಟ್ಟಿದ್ದಾರೆ. ಬಳ್ಳಾರಿಯ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ವರ್ಷದ ನಂದೀಶ್‌ ಡಿ. 12ರಂದು, ಸರಸ್ವತಿ ಡಿ. 13ರಂದು ಸಾವನ್ನಪ್ಪಿದ್ದಾರೆ. ಫಕೀರಮ್ಮ, ಮಂಜುಳಾ ಅವರು ಗಂಭೀರ ಗಾಯಗೊಂಡಿದ್ದರು. ಈ ಸಂಬಂಧ ಪೊಲೀಸ್‌ ಇನ್‌ಸ್ಪೆಕ್ಟರ್‌ ಸಲೀಂ ಪಾಷಾ ಎಂಬುವರು ರುದ್ರಪ್ಪ ವಿರುದ್ಧ ಕಲಂ 279, 337, 304(ಎ), ಐಪಿಸಿ ರೆ/ವಿ 3, ರೆ/ವಿ 181, 5 ರೆ/ವಿ 180 ಎಂ.ವಿ. ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.