ಬಳ್ಳಾರಿ: ಪಶ್ಚಿಮ ಬಂಗಾಳದ 1,318 ವಲಸಿಗರು ಶ್ರಮಿಕ ವಿಶೇಷ ರೈಲಿನಲ್ಲಿ ನಗರದ ರೈಲು ನಿಲ್ದಾಣದಿಂದ ಶನಿವಾರ ತಮ್ಮ ತವರಿನತ್ತ ಪ್ರಯಾಣ ಆರಂಭಿಸಿದರು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಎಲ್ಲರಿಗೂ ಕೈ ಬೀಸಿ ಶುಭ ಕೋರಿದರು. ಮತ್ತೇ ಬಳ್ಳಾರಿ ಜಿಲ್ಲೆಗೆ ಅತ್ಯಂತ ಖುಷಿಯಿಂದ ಬನ್ನಿ ಎಂದು ಹೇಳಿದರು.
ಜೀವನ ನಿರ್ವಹಣೆ ಸಲುವಾಗಿ ಬಳ್ಳಾರಿ, ತೋರಣಗಲ್ಲು ಸೇರಿದಂತೆ ಜಿಲ್ಲೆಯ ವಿವಿಧೆಡೆಗೆ ವಲಸೆ ಬಂದಿದ್ದ ಕಾರ್ಮಿಕರಿಗೆ ನಗರದ ಬಳ್ಳಾರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಹಾಗೂ ತೋರಣಗಲ್ಲಿನ ಸರ್ಕಾರಿ ಶಾಲೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಅವರಿಗೆ ಪ್ರಮಾಣಪತ್ರ ವಿತರಿಸಿ ಹಾಗೂ ಪ್ರಯಾಣದ ಟೋಕನ್ ನೀಡಲಾಗಿತ್ತು.
ಬೆಳಿಗ್ಗೆ ಏಳು ಗಂಟೆಯಿಂದಲೇ ಕಾರ್ಮಿಕರು ರೈಲು ನಿಲ್ದಾಣದಲ್ಲಿ ಹಾಜರಿದ್ದರು.
ಪ್ರಯಾಣದ ಸಂದರ್ಭದಲ್ಲಿ ಬಳಸಲು ಎಲ್ಲರಿಗೂ ತಲಾ ನಾಲ್ಕು ಬಿಸ್ಕಟ್ ಪೊಟ್ಟಣ, ಎರಡು ಬ್ರೆಡ್ ಪೊಟ್ಟಣ, ನಾಲ್ಕು ಲೀಟರ್ ನೀರು, ಆಹಾರ ಪೊಟ್ಟಣಗಳು, ಮಿರ್ಚಿ ಬಜಿ ಒಳಗೊಂಡ ಕಿಟ್ ಅನ್ನು ವಿತರಿಸಲಾಯಿತು.
ರೆಡ್ಕ್ರಾಸ್ ಸಂಸ್ಥೆಯವರು ಇದೇ ಸಂದರ್ಭದಲ್ಲಿ ಮಾಸ್ಕ್ ಹಾಗೂ ಲಘು ಉಪಹಾರ ವಿತರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ, ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್ ಖಾಂಡು, ಉಪವಿಭಾಗಾಧಿಕಾರಿ ರಮೇಶ್ ಕೊನರೆಡ್ಡಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೋಮಶೇಖರ ಬಂಕದ್, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಚಂದ್ರಶೇಖರ ಐಲಿ, ಅಲ್ತಾಫ್, ತಹಸೀಲ್ದಾರ್ ನಾಗರಾಜ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.