ಬಳ್ಳಾರಿ: ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ, ನಟ ಧನ್ವೀರ್, ಸಂಬಂಧಿಕರಾದ ಹೇಮಂತ್ ಮತ್ತು ಸುಶಾಂತ್ ನಾಯ್ಡು ಮಂಗಳವಾರ ಸಂಜೆ 4.30 ರಿಂದ 5ರವರೆಗೆ ಬಳ್ಳಾರಿ ಕಾರಾಗೃಹದಲ್ಲಿ ಭೇಟಿಯಾದರು. ಸುದ್ದಿಗಾರರ ಜೊತೆ ಮಾತನಾಡಲು ನಿರಾಕರಿಸಿದರು.
ವಿಜಯಲಕ್ಷ್ಮಿ ಅವರು ಬಟ್ಟೆ ಮತ್ತು ತಿಂಡಿ ತಿನಿಸುಗಳು ಇದ್ದ ಎರಡು ಚೀಲಗಳನ್ನು ತಂದಿದ್ದರು. ಸಂದರ್ಶಕರ ಕೊಠಡಿಗೆ ಬರುವಾಗ ಮತ್ತು ಮರಳುವಾಗ, ದರ್ಶನ್ ಕೈಯಲ್ಲಿ ಎರಡು ಚೀಲಗಳಿದ್ದವು.
‘ಬಳ್ಳಾರಿ ಕಾರಾಗೃಹದಲ್ಲಿ ರಕ್ತಸಂಬಂಧಿಗಳು ಹೊರತುಪಡಿಸಿ ಬೇರೆಯವರನ್ನು ಭೇಟಿಯಾಗಲು ದರ್ಶನ್ಗೆ ಅವಕಾಶವಿಲ್ಲ’ ಎಂದು ಕಾರಾಗೃಹ ಉತ್ತರ ವಲಯದ ಡಿಐಜಿ ಟಿ.ಪಿ.ಶೇಷ ಹೇಳಿದ್ದರು. ಆದರೆ, ಜೈಲು ಮಾರ್ಗಸೂಚಿಯಂತೆ ಸ್ನೇಹಿತರು, ಹಿತೈಷಿಗಳ ಭೇಟಿಗೆ ಅವಕಾಶ ನೀಡಲು ನ್ಯಾಯಾಲಯ ಮಂಗಳವಾರ ತಿಳಿಸಿದ ಹಿನ್ನೆಲೆಯಲ್ಲಿ ಧನ್ವೀರ್ ಮತ್ತು ಹೇಮಂತ್ ಅವರಿಗೆ ಭೇಟಿಯಾಗಲು ಸಾಧ್ಯವಾಯಿತು.
ನ್ಯಾಯಾಂಗ ಬಂಧನ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ, ಜಾಮೀನು ಅರ್ಜಿ ಸಲ್ಲಿಕೆ ಸೇರಿ ಕಾನೂನು ಹೋರಾಟದ ಬಗ್ಗೆ ಪತ್ನಿ ಜತೆಗೆ ದರ್ಶನ್ ಚರ್ಚಿಸಿದರು. ಭೇಟಿಗೆ ತಾಯಿ ಬಾರದಿರುವ ಬಗ್ಗೆ ದರ್ಶನ್ ಬೇಸರ ವ್ಯಕ್ತಪಡಿಸಿದರು ಎಂಬುದು ಗೊತ್ತಾಗಿದೆ. ಆದರೆ, ಇದನ್ನು ಕಾರಾಗೃಹದ ಅಧಿಕಾರಿಗಳು ಖಚಿತಪಡಿಸಲಿಲ್ಲ.
‘ಬೆಂಗಳೂರು ಕಾರಾಗೃಹದಿಂದ ಬರುವಾಗ ದರ್ಶನ್ ವಿಟಮಿನ್ ಮಾತ್ರೆಗಳನ್ನು ತಂದಿದ್ದರು. ಭೇಟಿ ವೇಳೆ ಕುಟುಂಬಸ್ಥರೂ ತಂದಿದ್ದರು. ಆದರೆ, ಅದ್ಯಾವುದನ್ನೂ ದರ್ಶನ್ಗೆ ನೀಡಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.