ಬಳ್ಳಾರಿ ಕಾರಾಗೃಹದ ವಿಶೇಷ ಭದ್ರತಾ ಕೊಠಡಿಯಿಂದ ಸಂದರ್ಶಕರ ಕೊಠಡಿಗೆ ಮಧ್ಯದ ಬೆರಳು ಪ್ರದರ್ಶಿಸುತ್ತ ಬಂದ ದರ್ಶನ್
ಬಳ್ಳಾರಿ: ‘ಮಾಧ್ಯಮಗಳಿಗೆ ನಾನು ಯಾವುದೇ ಸನ್ನೆ ಪ್ರದರ್ಶಿಸಿಲ್ಲ. ಹಾಗೊಂದು ವೇಳೆ ತಪ್ಪು ಮಾಡಿದ್ದರೆ ನನ್ನನ್ನು ಬೇರೆ ಜೈಲಿಗೆ ವರ್ಗಾಯಿಸಿ’ ಎಂದು ನಟ ದರ್ಶನ್ ಅಧಿಕಾರಿಗಳಿಗೆ ಹೇಳಿರುವುದಾಗಿ ಗೊತ್ತಾಗಿದೆ.
ಗುರುವಾರ ಕಾರಾಗೃಹದ ಹೊರ ವಿಶೇಷ ಭದ್ರತಾ ಕೊಠಡಿಯಿಂದ ಸಂದರ್ಶಕರ ಕೊಠಡಿಗೆ ತೆರಳುವ ಮತ್ತು ಮರಳುವ ವೇಳೆ ದರ್ಶನ್ ಮಧ್ಯದ ಬೆರಳು ಪ್ರದರ್ಶಿಸಿದ್ದರು. ಇದರ ಬಗ್ಗೆ ಕಾರಾಗೃಹದ ಅಧಿಕಾರಿಗಳು ದರ್ಶನ್ ಅವರನ್ನು ವಿಚಾರಿಸಿದ್ದು, ‘ನಾನು ಮಾಧ್ಯಮಗಳಿಗೆ ಬೆರಳು ತೋರಿಸಿಲ್ಲ. ನನ್ನಿಂದ ತಪ್ಪಾಗಿಲ್ಲ. ನಾನು ಮಾಡಿದ್ದು ತಪ್ಪಾಗಿದ್ದರೆ, ಬೇರೆ ಜೈಲಿಗೆ ವರ್ಗಾಯಿಸಿ’ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಶುಕ್ರವಾರ ದರ್ಶನ್ಗೆ ಟಿವಿ ಕೊಡಬೇಕಿತ್ತು. ಆದರೆ, ಗುರುವಾರದ ಘಟನೆಯಿಂದ ಟಿ.ವಿ ಕೊಡುವುದನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಎಲ್ಲರಿಗೂ ಟಿ.ವಿ ಕೊಟ್ಟಿದ್ದೀರಿ. ನನಗೂ ಕೊಡಿ’ ಎಂದು ದರ್ಶನ್ ನಿತ್ಯವೂ ಸಿಬ್ಬಂದಿಯನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.
‘ದರ್ಶನ್ಗೆ ಟಿ.ವಿ ಕೊಟ್ಟರೂ, ಯಾವುದೇ ಕೇಬಲ್ ಚಾನೆಲ್ಗಳು ನೋಡಲು ಸಿಗುವುದಿಲ್ಲ. ಜೈಲು ನಿಯಮಗಳ ಪ್ರಕಾರ ದೂರದರ್ಶನ (ಡಿಡಿ) ವಾಹಿನಿಗಳು ಮಾತ್ರವೇ ಲಭ್ಯವಾಗಲಿವೆ’ ಎಂದು ಅಧಿಕಾರಿಗಳು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.