ADVERTISEMENT

ಹೊಸಪೇಟೆ: ಹತ್ತು ಸಾವಿರ ಮನೆ ನಿರ್ಮಾಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 7:10 IST
Last Updated 23 ಡಿಸೆಂಬರ್ 2020, 7:10 IST
‘ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ’ಯ ಪದಾಧಿಕಾರಿಗಳು ಬುಧವಾರ ಹೊಸಪೇಟೆಯಲ್ಲಿ ತಹಶೀಲ್ದಾರ್‌ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
‘ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ’ಯ ಪದಾಧಿಕಾರಿಗಳು ಬುಧವಾರ ಹೊಸಪೇಟೆಯಲ್ಲಿ ತಹಶೀಲ್ದಾರ್‌ ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ: ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಿ, ಕೊಳೆಗೇರಿ ವಾಸಿಗಳಿಗೆ ಹತ್ತು ಸಾವಿರ ಮನೆ ನಿರ್ಮಿಸಿಕೊಡಬೇಕು ಎಂದು ‘ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ’ ಒತ್ತಾಯಿಸಿದೆ.

ಈ ಸಂಬಂಧ ಸಮಿತಿಯ ಪದಾಧಿಕಾರಿಗಳು ಬುಧವಾರ ಕಂದಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.

ಈಗಾಗಲೇ ಸರ್ಕಾರವು ವಿಜಯನಗರ ಜಿಲ್ಲೆ ಘೋಷಿಸಿದೆ. ಅಂತಿಮ ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನ ಆಕ್ಷೇಪಣೆ ಸ್ವೀಕರಿಸುತ್ತಿದೆ. ಈ ಭಾಗದ ಜನರ ಬಹುವರ್ಷಗಳ ಒತ್ತಾಸೆಯಂತೆ ಜಿಲ್ಲೆ ಘೋಷಿಸಿ ಅಂತಿಮ ಅಧಿಸೂಚನೆ ಹೊರಡಿಸಬೇಕು ಎನ್ನುವುದು ನಮ್ಮ ಸಂಘಟನೆಯ ಆಗ್ರಹವೂ ಆಗಿದೆ ಎಂದು ತಿಳಿಸಿದರು.

ADVERTISEMENT

ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ₹2,000 ಕೋಟಿ ಅನುದಾನ ಮೀಸಲಿಡಬೇಕು. ಖನಿಜ ನಿಧಿಯಿಂದ ₹1,000 ಕೋಟಿ ತೆಗೆದಿಡಬೇಕು. ಸ್ಲಂ ನಿವಾಸಿಗಳ ಸಮಗ್ರ ಕಲ್ಯಾಣಕ್ಕೆ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಿದರು.

ಸಮಿತಿಯ ಮುಖಂಡರಾದ ರಾಮಚಂದ್ರ, ಹುಲಿಗೆಮ್ಮ, ನಾಜರಾ, ಫಾತೀಮಾ, ಖೈರುನ್ನೀಸಾ, ರಜೀಯಾ ಬೇಗಂ, ಶ್ರೀನಿವಾಸ, ಹುಸೇನ್‌ಬೀ, ರೆಹಮಾನ್‌, ವೆಂಕಟಮ್ಮ, ಶಿವಪ್ಪ, ರೇಖಾ, ವಿಠ್ಠಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.