ADVERTISEMENT

ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 3:47 IST
Last Updated 27 ಜನವರಿ 2021, 3:47 IST
ಕಂಪ್ಲಿಯಲ್ಲಿ ಮಂಗಳವಾರ ದೇವಾಂಗ ಜಗದ್ಗುರು ದಯಾನಂದ ಪುರಿಸ್ವಾಮೀಜಿ ಶಾಸಕ ಜೆ.ಎನ್. ಗಣೇಶ್ ಅವರಿಗೆ ಮನವಿ ಸಲ್ಲಿಸಿದರು
ಕಂಪ್ಲಿಯಲ್ಲಿ ಮಂಗಳವಾರ ದೇವಾಂಗ ಜಗದ್ಗುರು ದಯಾನಂದ ಪುರಿಸ್ವಾಮೀಜಿ ಶಾಸಕ ಜೆ.ಎನ್. ಗಣೇಶ್ ಅವರಿಗೆ ಮನವಿ ಸಲ್ಲಿಸಿದರು   

ಕಂಪ್ಲಿ: ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಅಖಿಲ ಭಾರತ ದೇವಾಂಗ ಸಮಾಜದ ಜಗದ್ಗುರು ದಯಾನಂದಪುರಿ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು.

ಹಂಪಿಯ ಗಾಯತ್ರಿ ಪೀಠದಿಂದ ಬಾದಾಮಿ ಬನಶಂಕರಿ ದೇವಿಗೆ ಪೀತಾಂಬರ ಸೀರೆ ಸಮರ್ಪಿಸುವ ಪಲ್ಲಕ್ಕಿ ವಾಹನ ಮಂಗಳವಾರ ಕಂಪ್ಲಿ ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ಸ್ಥಳೀಯ ದೇವಾಂಗ ಸಮಾಜದ ಗದ್ದೆ ಚೌಡೇಶ್ವರಿ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಸ್ವಾಮೀಜಿ ಮಾತನಾಡಿದರು.

ರಾಜ್ಯದಲ್ಲಿ ದೇವಾಂಗ ಸಮುದಾಯದವರು ಸುಮಾರು 30ಲಕ್ಷ ಇದ್ದು,ರಾಜಕೀಯ, ಆರ್ಥಿಕ, ಔದ್ಯೋಗಿಕ ಸೇರಿ ಎಲ್ಲ ಕ್ಷೇತ್ರಗಳಲ್ಲೂ ಹಿಂದುಳಿದಿದ್ದಾರೆ. ಈ ಕಾರಣದಿಂದ ಮುಖ್ಯಮಂತ್ರಿಗಳು ನಿಗಮ ಸ್ಥಾಪನೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ADVERTISEMENT

ಈ ಕುರಿತ ಮನವಿಯನ್ನು ಸ್ವೀಕರಿಸಿದ ಶಾಸಕ ಜೆ.ಎನ್. ಗಣೇಶ್, ದೇವಾಂಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಅಧಿವೇಶನದಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ. ಸ್ಥಳೀಯ ಗದ್ದೆ ಚೌಡೇಶ್ವರಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನುದಾನ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.

ದೇವಾಂಗಮಠದ ಸಾವಿತ್ರಮ್ಮ, ದೇವಾಂಗ ಸಮಾಜದ ಅಧ್ಯಕ್ಷ ಗದ್ಗಿ ವಿರುಪಾಕ್ಷಿ, ಪಾದಯಾತ್ರೆ ಸೇವಾ ಸಮಿತಿ ಅಧ್ಯಕ್ಷ ಸೂಳೆಬಾವಿಯ ರವೀಂದ್ರ ಕಲಬುರಗಿ, ಸಂಚಾಲಕ ಗಂಗಾವತಿಯ ಪರಗಿ ನಾಗರಾಜ, ಗದ್ದೆ ಚೌಡೇಶ್ವರಿ ದೇವಸ್ಥಾನ ಸಮಿತಿ ಅಧ್ಯಕ್ಷ ದೂಪದ ಪ್ರಶಾಂತ್, ದೇವಾಂಗ ಸಮಾಜದ ಮಹಿಳಾ ಅಧ್ಯಕ್ಷೆ ಹಿಂಡಿ ತಾರಾ, ಸಮಾಜದ ಪದಾಧಿಕಾರಿಗಳು, ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.