ಉಚ್ಚಂಗಿದುರ್ಗ (ಬಳ್ಳಾರಿ ಜಿ.): ಸಮೀಪದ ಅರಸೀಕೆರೆ ಗ್ರಾಮದೇವತೆ ದಂಡಿನ ದುರ್ಗಮ್ಮ ದೇವಿ ಕಾರ್ತಿಕೋತ್ಸವದಲ್ಲಿ ಶನಿವಾರ ರಾತ್ರಿ 2.30ಕ್ಕೆ ನಡೆದ ಹೊಳೆ ಪೂಜೆಯಲ್ಲಿ ದಲಿತ ಪೂಜಾರಿಗಳ ಪಾದಸ್ಪರ್ಶಕ್ಕಾಗಿ ಭಕ್ತರು ಮುಗಿಬಿದ್ದರು.
ಕೋವಿಡ್ ಕಾರಣದಿಂದ ಜನ ಸೇರುವುದನ್ನು ತಡೆಯಲು ದೇವಿ ಉತ್ಸವಮೂರ್ತಿಯನ್ನು ತಡರಾತ್ರಿ 2.30ಕ್ಕೆ ತಿಮಲಾಪುರದ ಬಳಿ ಮಂಗಳವಾದ್ಯ ಗಳೊಂದಿಗೆ ಗಂಗಾ ಪೂಜೆಗೆ ಕರೆ ತರಲಾಯಿತು.
ಭಕ್ತರು ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಕಾದು ಕುಳಿತಿದ್ದರು.
ಪೂಜೆಯ ನಂತರ ದೇವಿಯ ಕೇಲು ಹೊತ್ತ ಇಬ್ಬರು ಪೂಜಾರಿಗಳು ದಾರಿಯುದ್ದಕ್ಕೂ ಮಲಗಿದ್ದ ಭಕ್ತರ ಮೈಮೇಲೆ ನಡೆಯುತ್ತ ಸಾಗಿದರು. ದೇಗುಲದವರೆಗೂ ಪೂಜಾರಿಯ ಪಾದ ನೆಲಕ್ಕೆ ಸೋಕದಂತೆ ಭಕ್ತರು ಮಲಗಿದ್ದರು.
ಪಾದಸ್ಪರ್ಶ ಸಿಗದ ಕೆಲ ಭಕ್ತರು ಪುನಃ ಮಲಗಿ ಬೆನ್ನು ತುಳಿಸಿಕೊಂಡರು. ದೀರ್ಘಕಾಲದಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು ದಲಿತ ಪೂಜಾರಿಗಳ ಪಾದ ಸ್ಪರ್ಶ ಮಾಡಿಸಿಕೊಂಡರೆ ದೇವಿಯ ಪಾದ ಸ್ಪರ್ಶವಾದಷ್ಟೇ ಪುಣ್ಯ ಬರುತ್ತದೆ. ಇದರಿಂದ ಕಾಯಿಲೆ, ಕಷ್ಟ-ಕಾರ್ಪಣ್ಯ ದೂರವಾಗುತ್ತವೆ ಎಂಬ ನಂಬಿಕೆ ಭಕ್ತರದ್ದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.