ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ತಂಬರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಒಂದು ವಾರದಿಂದ ಸುರಿದ ಜಿಟಿ ಜಿಟಿ ಮಳೆಗೆ 500 ಎಕರೆ ಪ್ರದೇಶದಲ್ಲಿ ಬೆಳೆದಿರುವ ಈರುಳ್ಳಿ ಬೆಳೆಗೆ ಕೊಳೆರೋಗ ತಗುಲಿದೆ.
ತಾಲ್ಲೂಕಿನಲ್ಲಿ ಅತಿ ಹೆಚ್ಚು ಈರುಳ್ಳಿ ಬೆಳೆಯುವ ಬನ್ನಿಗೋಳ ಗ್ರಾಮವೊಂದರಲ್ಲೇ 100ಕ್ಕೂ ಹೆಚ್ಚು ರೈತರು ಈರುಳ್ಳಿ ಬೆಳೆದಿದ್ದು, 250 ಎಕರೆಯಷ್ಟು ಬೆಳೆ ಅಧಿಕ ತೇವಾಂಶದಿಂದ ರೋಗಕ್ಕೆ ತುತ್ತಾಗಿದೆ. ಇದರಿಂದ ನೊಂದ ಗ್ರಾಮದ ಮೈನಳ್ಳಿ ಕೊಟ್ರೇಶಪ್ಪ ಎಂಬುವರು ಸೋಮವಾರ 3 ಎಕರೆಯಲ್ಲಿ ಬೆಳೆದಿದ್ದ 2 ತಿಂಗಳ ಬೆಳೆಯನ್ನು ಟ್ರಾಕ್ಟರ್ ಮೂಲಕ ನಾಶಪಡಿಸಿದರು.
ಪ್ರತಿ ಎಕರೆಗೆ ₹70 ಸಾವಿರ ಖರ್ಚು ಈರುಳ್ಳಿ ಬೆಳೆ ಬಿತ್ತನೆ ಮಾಡಲಾಗಿತ್ತು. ಆದರೆ, ಈಚೆಗೆ ಸುರಿದ ಮಳೆಯಿಂದಾಗಿ ಬೆಳೆಗೆ ಕೊಳೆರೋಗ ತಗುಲಿದೆ. ಕಳೆದ ವರ್ಷ ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ್ದೆವು. ಈ ಬಾರಿ ಉತ್ತಮ ಇಳುವರಿ ಬಂದಿತ್ತು. ಲಾಭ ಗಳಿಸುವ ನಿರೀಕ್ಷೆಯೂ ಇತ್ತು. ಆದರೆ, ಕೊಳೆರೋಗದಿಂದಾಗಿ ಮತ್ತೆ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ ಎಂದು ರೈತ ಮೈನಳ್ಳಿ ಕೊಟ್ರೇಶಪ್ಪ ಅಳಲು ತೋಡಿಕೊಂಡರು.
ತಾಲ್ಲೂಕಿನ ಕೃಷ್ಣಾಪುರ, ಸೊಬಟಿ, ಬ್ಯಾಸಿಗೆಬೇರಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲೂ ಈರುಳ್ಳಿ ಕೊಳೆರೋಗ ತಗುಲಿ, ರೈತರು ನಷ್ಟದ ಭೀತಿಯಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.