ADVERTISEMENT

‘ಜಾತಿ ಮೂಲಕ ದಾಸಿಮಯ್ಯನವರ ಗುರುತು ಸರಿಯಲ್ಲ’

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 13:10 IST
Last Updated 10 ಏಪ್ರಿಲ್ 2019, 13:10 IST
ಕಾರ್ಯಕ್ರಮದಲ್ಲಿ ಲೇಖಕ ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು
ಕಾರ್ಯಕ್ರಮದಲ್ಲಿ ಲೇಖಕ ವಿಠ್ಠಪ್ಪ ಗೋರಂಟ್ಲಿ ಮಾತನಾಡಿದರು   

ಹೊಸಪೇಟೆ: ‘ಜಾತಿ ಮೂಲಕ ದಾಸಿಮಯ್ಯನವರನ್ನು ಗುರುತಿಸುವ ಕ್ರಮ ಸರಿಯಲ್ಲ’ ಎಂದು ಲೇಖಕ ವಿಠ್ಠಪ್ಪ ಗೋರಂಟ್ಲಿ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವರ ದಾಸಿಮಯ್ಯ ಜಯಂತಿಯಲ್ಲಿ ‘ದೇವರ ದಾಸಿಮಯ್ಯ ವಚನಗಳ ಪ್ರಸ್ತುತತೆ’ ಕುರಿತು ಮಾತನಾಡಿದರು.

‘ದೇವರ ದಾಸಿಮಯ್ಯ ಅಥವಾ ಜೇಡರ ದಾಸಿಮಯ್ಯ ಎಂಬ ವಿವಾದ ಮುಖ್ಯವಲ್ಲ. ಆದರೆ, ಈ ಕುರಿತು ಸಂಶೋಧನೆ, ಚರ್ಚೆ ನಡೆಯಲಿ. ಬುದ್ಧ, ಬಸವ, ಕಬೀರ ಮುಂತಾದವರು ಸಾರ್ವಕಾಲಿಕ, ಸಾರ್ವದೇಶಿಕ ಸತ್ಯವನ್ನು ಹೇಳಿರುವ ಕಾರಣದಿಂದ ಇಂದಿಗೂ ಪ್ರಸ್ತುತರಾಗಿದ್ದಾರೆ’ ಎಂದರು.

ADVERTISEMENT

‘ಬಸವಣ್ಣನವರು ಅವರ ವಚನಗಳಲ್ಲಿ ದಾಸಿಮಯ್ಯನವರನ್ನು ಕೊಂಡಾಡಿದ್ದಾರೆ. ಸಮಾನತೆ, ಸಮಾನ ಬದುಕು ಹಂಚಿಕೆ, ಲಿಂಗ ಸಮಾನತೆ ಮೊದಲಾದ ವಿಚಾರಗಳನ್ನು ಮೊಟ್ಟ ಮೊದಲು ಬಿತ್ತಿದವರು ವಚನಕಾರರು. ಜನರು ಆಡು ಭಾಷೆಯ ಮೂಲಕ ವಚನಗಳನ್ನು ರಚಿಸಿದ ಕೀರ್ತಿ ದಾಸಿಮಯ್ಯ ಹಾಗೂ ಶಿವಶರಣರಿಗೆ ಸಲ್ಲುತ್ತದೆ’ ಎಂದು ತಿಳಿಸಿದರು.

ಕುಲಪತಿ ಪ್ರೊ. ಸ.ಚಿ. ರಮೇಶ, ‘ವಚನಕಾರರೆಲ್ಲರ ವಚನಗಳನ್ನು ಯಾಕೆ? ಹೇಗೆ? ಯಾರಿಗೆ? ಪ್ರಸ್ತುತ ಎಂಬ ಮೂರು ಪ್ರಶ್ನೆಗಳ ಮೂಲಕ ಅರ್ಥ ಮಾಡಿಕೊಳ್ಳಬೇಕಾಗಿದೆ. 12ನೇ ಶತಮಾನದಲ್ಲಿ ಬದುಕಿದ ವಚನಕಾರ ದಾಸಿಮಯ್ಯ ಅವರ ಕಾಲದ ಸಾಮಾಜಿಕ ಸಮಸ್ಯೆಗಳಾದ ಹಸಿವು, ಬಡತನ, ಶ್ರೀಮಂತ-ಬಡವ, ಮೇಲು– ಕೀಳು ಇವು ಸಮಕಾಲೀನ ಸಮಸ್ಯೆಗಳಾಗಿದ್ದು, ಇಂದಿಗೂ– ಅಂದಿಗೂ ಅಂತಹ ವ್ಯತ್ಯಾಸಗಳು ಕಾಣಿಸುತ್ತಿಲ್ಲ’ ಎಂದರು.

ಕುಲಸಚಿವ ಅಶೋಕಕುಮಾರ ರಂಜೇರೆ, ದೇವರ ದಾಸಿಮಯ್ಯ ಅಧ್ಯಯನ ಪೀಠದ ಸಂಚಾಲಕ ಗೋವಿಂದ, ಸಂಶೋಧನಾ ವಿದ್ಯಾರ್ಥಿಗಳಾದ ವಿಶ್ವನಾಥ, ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.