ADVERTISEMENT

₹100 ಪಡೆದದ್ದಕ್ಕೆ ಹೆಡ್‌ ಕಾನ್‌ಸ್ಟೆಬಲ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 5:17 IST
Last Updated 9 ಡಿಸೆಂಬರ್ 2020, 5:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಹೊಸಪೇಟೆ: ರೈತನಿಂದ ₹100 ಲಂಚ ಪಡೆದ ಆರೋಪದ ಮೇರೆಗೆ ಇಲ್ಲಿನ ಟಿ.ಬಿ. ಡ್ಯಾಂ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ಬಸವರಾಜ ಎಂಬುವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್‌ ಮಂಗಳವಾರ ಅಮಾನತುಗೊಳಿಸಿದ್ದಾರೆ.

ಡಿ. 4ರಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 50ರ ಮಾರ್ಗವಾಗಿ ನಗರದ ಕಡೆಗೆ ರೈತನೊಬ್ಬ ಭತ್ತ ಕಟಾವು ಮಾಡುವ ಯಂತ್ರ ತೆಗೆದುಕೊಂಡು ಹೋಗುತ್ತಿದ್ದ. ಈ ವೇಳೆ ಅಲ್ಲಿನ ಚೆಕ್‌ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿದ್ದ ಬಸವರಾಜ, ರೈತನನ್ನು ತಡೆದು ₹100 ತೆಗೆದುಕೊಂಡಿದ್ದಾರೆ. ಅಲ್ಲಿಂದಲೇ ಹಾದು ಹೋಗುತ್ತಿದ್ದ ಸಾಮಾಜಿಕ ಕಾರ್ಯಕರ್ತ ರವಿ ಎಂಬುವರು ಅದನ್ನು ಗಮನಿಸಿ, ಮೊಬೈಲ್‌ನಲ್ಲಿ ಛಾಯಾಚಿತ್ರ ತೆಗೆದುಕೊಂಡಿದ್ದಾರೆ. ನಂತರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ರೈತನಿಂದ ಪಡೆದಿದ್ದ ಹಣವನ್ನು ಬಸವರಾಜ ವಾಪಸ್‌ ನೀಡಿದ್ದಾರೆ. ಈ ವಿಷಯ ಗೊತ್ತಾದ ನಂತರ ಎಸ್ಪಿ ಅವರು ಬಸವರಾಜ ಅವರನ್ನು ಅಮಾನತುಗೊಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT