ಹೊಸಪೇಟೆ: ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದ ಪ್ರಯಾಣಿಕ ಆಯತಪ್ಪಿ ರೈಲಿನಡಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬರನ್ನು ರೈಲ್ವೆ ಭದ್ರತಾ ಸಿಬ್ಬಂದಿ ಬದುಕುಳಿಸಿದ ಘಟನೆ ಹೊಸಪೇಟೆಯಲ್ಲಿ ಜರುಗಿದೆ.
ಭಾನುವಾರ ಸಂಜೆ ತಿರುಪತಿ ಪ್ಯಾಸೆಂಜರ್ (ಗಾಡಿ ಸಂಖ್ಯೆ 57274) ನಗರದ ನಿಲ್ದಾಣದಿಂದ ಹೊರಟಿತ್ತು. ಕೊನೆಯ ಗಳಿಗೆಯಲ್ಲಿ ಚಲಿಸುವ ರೈಲನ್ನು ಹತ್ತಲು ಯತ್ನಿಸಿದ ನಗರದ ಎ.ಪಿ.ಎಂ.ಸಿ ಬಡಾವಣೆ ನಿವಾಸಿ ಯಮನಪ್ಪ (45) ರೈಲಿನ ಅಡಿಗೆ ಬೀಳುವುದರಲ್ಲಿದ್ದರು.
ಆದರೆ ಸಮಯಪ್ರಜ್ಞೆ ಮೆರೆದ ರೈಲ್ವೆ ಭದ್ರತಾ ಸಿಬ್ಬಂದಿ ಎಸ್. ಕಾಳಣ್ಣ ಯಮನಪ್ಪನನ್ನು ಬೀಳದಂತೆ ಎತ್ತಿಹಿಡಿದು, ರೈಲಿನೊಂದಿಗೆ ಓಡಿದರು. ಅವರನ್ನು ನಿಲ್ದಾಣಕ್ಕೆ ಎಳೆದುಹಾಕಿದರು. ಕೂದಲೆಳೆಯ ಅಂತರದಲ್ಲಿ ಯಮನಪ್ಪ ಅವಘಡದಿಂದ ಬದುಕುಳಿದರು.
ಈ ದೃಶ್ಯ ನಿಲ್ದಾಣದ ಸಿ.ಸಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾಳಣ್ಣ ಅವರ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.