ಬಳ್ಳಾರಿ ಜಿಲ್ಲೆಯ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಕಣ ರಂಗೇರಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ಕವಿರಾಜ್ ಅರಸ್ ಅವರ ಸಂದರ್ಶನ ಇಲ್ಲಿದೆ.
* ನಿಮ್ಮನ್ನೇಕೇ ಜನ ಆಯ್ಕೆ ಮಾಡಬೇಕು?
ಆನಂದ್ ಸಿಂಗ್ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇವರು ಗಣಿ ಲೂಟಿ ಹೊಡೆಯದಿದ್ದರೆ ಗಣಿಗಾರಿಕೆ ಬಂದ್ ಆಗುತ್ತಿರಲಿಲ್ಲ. ಯುವಕರಿಗೆ ಉದ್ಯೋಗವೇ ಇಲ್ಲ. ಅವರ ವಿರುದ್ಧ ಜನರಿಗೆ ಬಹಳ ಅಸಮಾಧಾನ ಇದೆ. ಗೆದ್ದ ನಂತರ ಸಕ್ಕರೆ ಕಾರ್ಖಾನೆ ಮೊದಲು ಆರಂಭಿಸುತ್ತೇನೆ. ಕಾರ್ಖಾನೆಯವರು ಮುಂದೆ ಬರದಿದ್ದರೆ ನಾನೇ ಖರೀದಿಸಿ, ಆರಂಭಿಸುವೆ.
* ಬಿಜೆಪಿ ವಿರುದ್ಧ ಬಂಡಾಯವೇಳಲು ಪ್ರಮುಖ ಕಾರಣವೇನು?
ಎಷ್ಟು ದಿನ ಸುಮ್ಮನೆ ಕೂರಬೇಕು. ಬಿಜೆಪಿ ಕಚೇರಿಯ ಕಸ ಹೊಡ್ಕೊಂಡು ಎಷ್ಟು ದಿನ ಇರಬೇಕು. ಪಕ್ಷದ ಯಾವುದೇ ಸಾಮಾನ್ಯ ಕಾರ್ಯಕರ್ತರಿಗೂ ಟಿಕೆಟ್ ಕೊಟ್ಟಿದ್ದರೂ ಅವರ ಪರ ಕೆಲಸ ಮಾಡುತ್ತಿದ್ದೆ. ಆದರೆ, ಪಕ್ಷಾಂತರ ಮಾಡಿದವರಿಗೆ ಟಿಕೆಟ್ ಕೊಟ್ಟು ಪಕ್ಷದ ಕಾರ್ಯಕರ್ತರಿಗೆ ಅಪಮಾನ ಮಾಡಿದ್ದಾರೆ. ಸ್ವಾಭಿಮಾನಕ್ಕಾಗಿ ಬಿಜೆಪಿ ತೊರೆದು ಸ್ಪರ್ಧಿಸಿದ್ದೇನೆ.
* ಆನಂದ್ ಸಿಂಗ್ ಅವರಿಗೆ ಟಿಕೆಟ್ ಕೊಟ್ಟಾಗ ನೀವೂ ಸೇರಿದಂತೆ ಬಿಜೆಪಿಯ ಕೆಲ ಮುಖಂಡರು ವಿರೋಧಿಸಿದ್ದೀರಿ. ಈಗ ನಿಮ್ಮನ್ನು ಏಕಾಂಗಿ ಮಾಡಿದ್ದಾರಲ್ಲ?
ನಾನು ಏಕಾಂಗಿ ಅಲ್ಲ. ಹುಲಿ ಹುಲ್ಲು ತಿನ್ನುವುದಿಲ್ಲ. ಅದು ಏಕಾಂಗಿಯಾಗಿಯೇ ಬೇಟೆಯಾಡುತ್ತದೆ.
* ಬಿ. ಶ್ರೀರಾಮುಲು ಅವರ ಕುಮ್ಮಕ್ಕಿನಿಂದ ಚುನಾವಣೆಗೆ ನಿಂತಿದ್ದೀರಿ ಎಂಬ ಆರೋಪ ನಿಮ್ಮ ಮೇಲಿದೆ...
ನಾನು ಯಾವ ನಾಯಕನ ಮಾತು ಕೇಳಿಲ್ಲ. ಸ್ವಾಭಿಮಾನಕ್ಕಾಗಿ ಚುನಾವಣೆಗೆ ನಿಂತಿದ್ದೇನೆ. ಗೆದ್ದರೆ ವಿಜಯನಗರ ಕ್ಷೇತ್ರದ ಮತದಾರರ ಗೆಲುವು. ಸೋತರೆ ಅವರ ಸೋಲು. ನನಗೇನೂ ಆಗಬೇಕಿಲ್ಲ.
* ಆನಂದ್ ಸಿಂಗ್ ಅವರ ಅನರ್ಹತೆ ಬಗ್ಗೆ ನಿಮಗೇನು ಅನಿಸುತ್ತದೆ?
ಸುಪ್ರೀಂಕೋರ್ಟ್ ಒಳ್ಳೆಯ ತೀರ್ಮಾನ ಕೊಟ್ಟಿದೆ. ಪದೇ ಪದೇ ಪಕ್ಷ ಬದಲಾಯಿಸುವವರಿಗೆ ಛೀಮಾರಿ ಹಾಕಿದೆ. ಇಷ್ಟಿದ್ದರೂ ಚುನಾವಣೆಗೆ ನಿಂತಿದ್ದಾರಲ್ಲ. ವಿಜಯನಗರ ಕ್ಷೇತ್ರವನ್ನು ಎಷ್ಟು ಹಾಳು ಮಾಡಬೇಕೋ ಅಷ್ಟು ಹಾಳು ಮಾಡಿದ್ದಾರೆ. ಈಗ ಪುನಃ ಗೆದ್ದರೆ ಮತ್ತಷ್ಟು ಹಾಳಾಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.