ADVERTISEMENT

ಕುರುಗೋಡು: ಮದ್ಯ ಅಕ್ರಮ ಮಾರಾಟ ತಡೆಗೆ ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 2:58 IST
Last Updated 18 ಡಿಸೆಂಬರ್ 2025, 2:58 IST
ಕುರುಗೋಡು ತಾಲ್ಲೂಕಿನ ಗುತ್ತಿಗನೂರು ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತಡೆಯುವಂತೆ ಒತ್ತಾಯಿಸಿ ತಹಶೀಲ್ದಾರ್ ನರಸಪ್ಪ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು
ಕುರುಗೋಡು ತಾಲ್ಲೂಕಿನ ಗುತ್ತಿಗನೂರು ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತಡೆಯುವಂತೆ ಒತ್ತಾಯಿಸಿ ತಹಶೀಲ್ದಾರ್ ನರಸಪ್ಪ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು   

ಕುರುಗೋಡು: ತಾಲ್ಲೂಕಿನ ಗುತ್ತಿಗನೂರು ಗ್ರಾಮದ ಗೂಡಂಗಡಿಗಳಲ್ಲಿ ನಡೆಯುತ್ತಿರುವ ಮದ್ಯ ಅಕ್ರಮ ಮಾರಾಟ ತಡೆಯಲು ಒತ್ತಾಯಿಸಿ ಡಾ.ಬಾಬು ಜಗಜೀವನ್ ರಾಂ ಜನಜಾಗೃತಿ ವೇದಿಕೆ ನೇತೃತ್ವದಲ್ಲಿ ಗ್ರಾಮಸ್ಥರು ತಹಸೀಲ್ದಾರ್ ನರಸಪ್ಪ ಹಾಗೂ ಪಿಎಸ್‍ಐ ಸುಪ್ರೀತ್ ಅವರಿಗೆ ಸೋಮವಾರ ಪ್ರತ್ಯೇಕವಾಗಿ ಮನವಿ ಸಲ್ಲಿಸಿದರು.

ಡಾ.ಬಾಬು ಜಗಜೀವನ್ ರಾಂ ಜನಜಾಗೃತಿ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಶ್ ಸಿದ್ದಮ್ಮನಹಳ್ಳಿ ಮಾತನಾಡಿ, ಗ್ರಾಮದ 30ಕ್ಕೂ ಅಧಿಕ ಗೂಡಂಗಡಿಯಲ್ಲಿ ಮದ್ಯ ಅಕ್ರಮ ಮಾರಾಟ ಮಾಡುತ್ತಿದ್ದಾರೆ. ಗ್ರಾಮದಲ್ಲಿ ಸುಲಭವಾಗಿ ಮದ್ಯ ದೊರೆಯುವುದರಿಂದ ಯುವಕರು ಕುಡಿತದ ಚಟಕ್ಕೆ ಬಲಿಯಾಗಿ ಸುಂದರ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮದ್ಯ ಖರೀದಿಗೆ ಹಣ ಸಿಗದ ಸಂದರ್ಭದಲ್ಲಿ ಮನೆಯಲ್ಲಿನ ವಸ್ತು ಕಳವು ಮಾಡುವ ಪ್ರಕರಣ ಹೆಚ್ಚುತ್ತಿವೆ. ಜತೆಗೆ ಕುಟುಂಬ ಕಲಹದಿಂದ ಮಕ್ಕಳ ಶಿಕ್ಷಣದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಮಹಿಳೆಯರು ದುಡಿದ ಹಣದಲ್ಲಿ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಯುವಕರು, ಅಪ್ರಾಪ್ತರು ಸೇರಿ ಬಹುತೇಕರು ಮದ್ಯವ್ಯಸನಿಗಳಾಗಿ ಬದಲಾಗುತ್ತಿದ್ದಾರೆ. ಕೆಲವರು ಜೀವ ಕಳೆದುಕೊಂಡ ಉದಾಹಣೆಯೂ ಇದೆ. ಗ್ರಾಮದಲ್ಲಿ ಬಡಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಯಿಂದ ಮುಕ್ತಿಗೊಳಿಸಲು ಮದ್ಯ ಅಕ್ರಮ ಮಾರಾಟಗಾರರ ವಿರುದ್ದ ಕ್ರಮಕೈಗೊಳ್ಳಬೇಕು ಒತ್ತಾಯಿಸಿದರು.

ADVERTISEMENT

ಮನವಿ ಸ್ವೀಕರಿಸಿದ ತಹಶೀಲ್ದಾರ್ ನರಸಪ್ಪ ಮಾತನಾಡಿ, ಅಬಕಾರಿ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿನೀಡಿ ಪರಿಶೀಲಿಸಲಾಗುವುದು. ಮದ್ಯ ಅಕ್ರಮ ಮಾರಾಟ ಕಂಡುಬಂದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಂಘಟನೆ ಮುಖಂಡರಾದ ಪರಶುರಾಮ, ಅಯ್ಯಪ್ಪ, ವಿರೇಶಪ್ಪ, ಹುಲಿಗೆಮ್ಮ ಮತ್ತು ಜಯಶ್ರೀ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.