ಕಂಪ್ಲಿ: ಪಟ್ಟಣದ ವಿವಿಧ ರಸ್ತೆಗಳಲ್ಲಿ ವಾಹನಗಳು ಮತ್ತು ಜನ ಸಂಚಾರಕ್ಕೆ ತೊಂದರೆ ಕೊಡುವ ಬಿಡಾಡಿ ದನಗಳನ್ನು ಪುರಸಭೆ ಸಿಬ್ಬಂದಿ ಸೆರೆ ಹಿಡಿದು ಗೋಶಾಲೆಗೆ ಕಳುಹಿಸಲು ಬುಧವಾರದಿಂದ ಕಾರ್ಯಾಚರಣೆ ಆರಂಭಿಸಿದ್ದಾರೆ.
ಸ್ಥಳೀಯ ಅಂಬೇಡ್ಕರ್ ವೃತ್ತ, ನಡುವಲ ಮಸೀದಿ, ಕೊಟ್ಟಾಲು ರಸ್ತೆ, ಹಳೆ ಸಿಂಡಿಕೇಟ್ ಬ್ಯಾಂಕ್ ಬಳಿ ಸೇರಿದಂತೆ ವಿವಿಧೆಡೆ ಬಿಡಾಡಿ ಜಾನುವಾರುಗಳು ಸಾಮಾನ್ಯವಾಗಿ ಕಂಡುಬರುತ್ತವೆ.
ಬೈಕ್ನ ಸೈಡ್ ಬ್ಯಾಗ್ನಲ್ಲಿರುವ ಹಣ್ಣು, ತರಕಾರಿ, ದಿನಸಿ ಸಾಮಾನುಗಳನ್ನು ಕಿತ್ತಿ ತಿಂದು ಹಾಳುಮಾಡುತ್ತಿವೆ. ತಳ್ಳು ಗಾಡಿ ಮಾರಾಟಗಾರರಿಗೆ ತುಂಬಾ ಕಿರಿಕಿರಿ ಕೊಡುತ್ತವೆ. ಸಂಜೆಯಾಗುತ್ತಿದ್ದಂತೆ ರಸ್ತೆ ಮಧ್ಯೆ ನಿಲ್ಲುವುದು, ಮಲಗುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಮುಂದುವರಿದಿದೆ. ಇದನ್ನು ಮನಗಂಡ ಪುರಸಭೆಯವರು ಪ್ರಸ್ತುತ ಕಾರ್ಯಕ್ರಿಯೆಗೆ ಮುಂದಾಗಿದ್ದಾರೆ.
ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಕೆ. ದುರುಗಣ್ಣ ಮಾತನಾಡಿ, ಬಿಡಾಡಿ ದನಗಳನ್ನು ಹಿಡಿದು ತಾಲ್ಲೂಕಿನ ದೇವಮುದ್ರ ಕ್ರಾಸ್ ಬಳಿಯ ಕಲ್ಯಾಣ ಚೌಕಿ ಮಠದ ಕಾಮಧೇನು ಗೋಶಾಲೆಗೆ ರವಾನಿಸಲಾಗುತ್ತಿದೆ. ಇನ್ನು ಮುಂದಾದರು ದನಕರುಗಳ ಮಾಲೀಕರು ಎಚ್ಚೆತ್ತು ತಮ್ಮ ಜಾನುವಾರುಗಳನ್ನು ಬೀದಿಗೆ ಬಿಡದೆ, ಮನೆಯಲ್ಲಿ ಕಟ್ಟಿ ಆರೈಕೆ ಮಾಡಿಕೊಳ್ಳುವಂತೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.