ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ಇಲ್ಲಿಯ ಕೋಟೆ ಪ್ರದೇಶದ ಬಳಿ ಹರಿಯುವ ನದಿಗೆ 60,000ದಿಂದ 85,000 ಕ್ಯೂಸೆಕ್ ನೀರು ಶುಕ್ರವಾರ ಹರಿದು ಬರುತ್ತಿದೆ.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಪಿಐ ಕೆ.ಬಿ. ವಾಸುಕುಮಾರ ಭೇಟಿ ನೀಡಿ, ನದಿಪಾತ್ರದ ಜನವಸತಿ ಪ್ರದೇಶದ ಬಳಿ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಪರಿಶೀಲಿಸಿದರು.
ನದಿಗೆ 1 ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಹರಿದು ಬಂದಲ್ಲಿ ಕಂಪ್ಲಿ–ಗಂಗಾವತಿ ಸಂಪರ್ಕ ಸೇತುವೆ ಮುಳುಗಡೆ ಸಾಧ್ಯತೆ, ಕೋಟೆ ಪ್ರದೇಶದ ನಾಗಮ್ಮಕಟ್ಟೆ, ಹೊಳೆ ಆಂಜನೇಯ ದೇವಸ್ಥಾನ ಇನ್ನಿತರ ಸ್ಥಳಗಳು ಜಲಾವೃತವಾಗುವುದರಿಂದ ಪುರಸಭೆ ವತಿಯಿಂದ ಬೆಳಕಿನ ವ್ಯವಸ್ಥೆ ಕಲ್ಪಿಸಲು ಪುರಸಭೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.
‘ಕೋಟೆ ಪ್ರದೇಶದ ಜನವಸತಿ ಪ್ರದೇಶದ ಸುತ್ತಮುತ್ತ ಸ್ವಚ್ಛತೆ ಕೈಗೊಂಡು ಬ್ಲೀಚಿಂಗ್ ಪೌಡರ್ ಎರಚಲಾಗುವುದು. ಕುಡಿಯುವ ನೀರಿನ ತೊಂದರೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ತಿಳಿಸಿದರು.
ನದಿ ಬಳಿ ಮುನ್ನೆಚ್ಚರಿಕೆಯಾಗಿ ಪೊಲೀಸ್ ಕಾವಲು ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ. ಷಣ್ಮುಖಪ್ಪ, ಪುರಸಭೆ ನೈರ್ಮಲ್ಯ ನಿರೀಕ್ಷಕ ಪ್ರಕಾಶಬಾಬು, ಎಂಜಿನಿಯರ್ ರಾಮಚಂದ್ರ ಗೊಲ್ಲರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.