ಬಳ್ಳಾರಿ: ‘ರಾಜ್ಯ ಸರ್ಕಾರ ಜಾತಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ಮೂಲಕ ದುಡ್ಡು ಹೊಡೆಯುವ ಹಾಗೂ ಬಿಪಿಎಲ್ ಕಾರ್ಡ್ಗಳನ್ನು ರದ್ದುಗೊಳಿಸುವ ಹುನ್ನಾರ ನಡೆಸಿದೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆಪಾದಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮೀಕ್ಷೆಗೆ ಬಜೆಟ್ನಲ್ಲಿ ₹420 ಕೋಟಿ ನಿಗದಿಗೊಳಿಸಲಾಗಿದೆ. ಈ ಹಿಂದೆ ಸಮೀಕ್ಷೆಯ ಹೆಸರಿನಲ್ಲಿ ಹಣ ಹೊಡೆದರು. ಇದೀಗ ಮತ್ತೆ ಸಮೀಕ್ಷೆಗೆಂದು ಕೋಟ್ಯಂತರ ಹಣ ಮೀಸಲಿಡಲಾಗಿದೆ. ದುಬಾರಿ ಸಮೀಕ್ಷೆಯ ಹಿಂದೆ ದುಡ್ಡು ಹೊಡೆಯುವ ಹುನ್ನಾರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರದ್ದಾಗಿದೆ’ ಎಂದು ಆರೋಪಿಸಿದರು.
‘10 ವರ್ಷಗಳ ಹಿಂದೆ ಕಾಂತರಾಜ ಆಯೋಗವು ₹150 ಕೋಟಿ ಖರ್ಚು ಮಾಡಿ 54 ಪ್ರಶ್ನೆಗಳ ಸಮೀಕ್ಷೆ ಮಾಡಿತ್ತು. ಅದು ಅವೈಜ್ಞಾನಿಕ ಎಂದು ಇದೀಗ 60 ಪ್ರಶ್ನೆಗಳ ಸಮೀಕ್ಷೆಯನ್ನು ಸರ್ಕಾರ ಮಾಡುತ್ತಿದೆ. ಜಾತಿ ಸಮೀಕ್ಷೆಯಲ್ಲಿ ಸಮುದಾಯಗಳ ಮುಂದೆ ‘ಕ್ರೈಸ್ತ’ ಎಂಬ ಪದವನ್ನು ಸೇರಿಸಲಾಗಿದೆ. ಇದು ಭವಿಷ್ಯದಲ್ಲಿ ದಾಖಲೆಗಳ ತಾಂತ್ರಿಕ ಸಮಸ್ಯೆಗೆ ಕಾರಣವಾಗಲಿದೆ. ಜತೆಗೆ ಜಾತಿಗಳ ನಡುವೆ ದ್ವೇಷ ಬೆಳೆಯಲು ಕಾರಣವಾಗಲಿದೆ’ ಎಂದರು.
‘ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿರುವ ಮಧುಸೂದನ್ ನಾಯಕ ಸಮೀಕ್ಷೆ ಹೊಣೆ ಹೊತ್ತಿದ್ದಾರೆ. ಕಾಂಗ್ರೆಸ್ನ ಹೈಕಮಾಂಡ್ ಓಲೈಸಲು ಮರು ಸಮೀಕ್ಷೆಗೆ ಸಿದ್ಧರಾಮಯ್ಯ ಮುಂದಾಗಿದ್ದಾರೆ. ಕಾಂಗ್ರೆಸ್ನ ಹೈಕಮಾಂಡ್ಗೆ ರಾಜ್ಯವು ಎಟಿಎಂ ಆಗಿದೆ’ ಎಂದು ವ್ಯಂಗ್ಯವಾಡಿದರು.
‘ಬಿಪಿಎಲ್ ಕಾರ್ಡುದಾರರನ್ನು ಮತ್ತಷ್ಟು ಕಡಿಮೆಗೊಳಿಸಬೇಕು. ಗ್ಯಾರಂಟಿ ಯೋಜನೆಗಳಿಂದ ಜನರು ಆರ್ಥಿಕ ಸಬಲರಾಗಿದ್ದಾರೆ ಎಂಬ ಕಾರಣವೊಡ್ಡಿ ಕಾರ್ಡ್ಗಳನ್ನು ರದ್ದು ಮಾಡಬೇಕು ಎಂಬುದೇ ಕಾಂಗ್ರೆಸ್ ಸರ್ಕಾರದ ಸಮೀಕ್ಷೆ ಹಿಂದಿನ ದುರುದ್ದೇಶವಾಗಿದೆ’ ಎಂದು ಹೇಳಿದರು.
‘17ನೇ ಬಜೆಟ್ ಅನುಮಾನ’
‘ನಾನು 16 ಬಜೆಟ್ ಮಂಡಿಸಿದ್ದೇನೆ ಎಂದು ಸಿದ್ಧರಾಮಯ್ಯ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರು 17ನೇ ಬಜೆಟ್ ಮಂಡಿಸುವುದು ಅನುಮಾನ. ಸಂಕಷ್ಟ ಬಂದಾಗಲೆಲ್ಲಾ ಸಮೀಕ್ಷೆ ಮಾಡುವ ಸಿದ್ಧರಾಮಯ್ಯ ಈಗ ಮತ್ತೊಂದು ಸಮೀಕ್ಷೆಗೆ ಮುಂದಾಗಿದ್ದಾರೆ. ಅವರು ಎಷ್ಟು ದಿನ ಖುರ್ಚಿಯಲ್ಲಿರುತ್ತಾರೋ ನೋಡಬೇಕು’ ಎಂದು ಶ್ರೀರಾಮುಲು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.