
ಕೊಟ್ಟೂರು: ‘ಕ್ಷೇತ್ರದ ಜನ ನನ್ನ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿರುವುದರಿಂದ ಅಭಿವೃದ್ಧಿ ಕಾರ್ಯಗಳ ಮೂಲಕ ಅವರ ಋಣ ತೀರಿಸಲು ಮುಂದಾಗುವೆ‘ ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.
ತಾಲ್ಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ಗುರುವಾರ ಸಮುದಾಯ ಭವನದ ಕಾಮಗಾರಿ ಹಾಗೂ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಅಪೂರ್ಣಗೊಂಡ ಸಮುದಾಯ ಭವನಕ್ಕೆ ಕಳೆದ ವರ್ಷವೇ ಅನುದಾನ ನೀಡುವ ಉದ್ದೇಶವಿತ್ತು. ಆದರೆ ಸರ್ಕಾರದ ಆರ್ಥಿಕ ಪರಿಸ್ಥಿತಿ ತಮಗೆಲ್ಲರಿಗೂ ತಿಳಿದ ವಿಷಯ ಆಗಿರುವುದರಿಂದ ಕೆಕೆಆರ್ಡಿಬಿ ಯೋಜನೆ ಅಡಿಯಲ್ಲಿ ಒಂದು ಕೋಟಿ ಅನುದಾನ ನೀಡಿದ್ದು ಮುಂದಿನ ವರ್ಷದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ವೇಳೆಗೆ ಸಮುದಾಯ ಭವನ ಪೂರ್ಣ ಗೊಳ್ಳುತ್ತದೆ ಎಂದರು.
ಈ ಸಮುದಾಯ ಭವನದಲ್ಲಿ ಸಾಮೂಹಿಕ ಮದುವೆಗಳು ಹೆಚ್ಚಿನ ಮಟ್ಟದಲ್ಲಿ ನಡೆಯಲಿ ಜೊತೆಯಲ್ಲಿ ಬಡಬಗ್ಗರ ಮಕ್ಕಳ ಮದುವೆಗೆ ಹಣ ಪಡೆಯದೇ ಉಚಿತ ಕಲ್ಯಾಣ ಕಾರ್ಯಗಳು ನಡೆಸುವ ಮೂಲಕ ಚಪ್ಪರದಹಳ್ಳಿ ಗ್ರಾಮ ಇತರೆ ಗ್ರಾಮಗಳಿಗೆ ಮಾದರಿಯಾಗಲಿ ಎಂದು ಆಶಿಸಿದರು.
ಜ್ಙಾನ ಗುರು ವಿದ್ಯಾ ಪೀಠದ ಕಾರ್ಯದರ್ಶಿ ಎಂ.ಎಂ.ಜೆ.ಹರ್ಷವರ್ಧನ್ ಮಾತನಾಡಿ, ಶಾಸಕರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು ಅವರು ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಹಾಗೂ ಮುಖಂಡರಾದ ಅಂಬ್ಲಿ ಕೊಟ್ರಪ್ಪ, ಕೊಟ್ರೇಶಪ್ಪ , ಬೂದಿ ಶಿವಕುಮಾರ್, ತಿಮ್ಮಲಾಪುರ ಕೊಟ್ರೇಶ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.