
ಹೂವಿನಹಡಗಲಿ: ಫೆ. 12ರಂದು ಜರುಗುವ ಕೊಟ್ಟೂರೇಶ್ವರ ರಥೋತ್ಸವ ಪ್ರಯುಕ್ತ ಕೊಟ್ಟೂರು ಸುಕ್ಷೇತ್ರಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರಿಗೆ ತಾಲ್ಲೂಕಿನ ಹೊಳಗುಂದಿ, ಉತ್ತಂಗಿ ಗ್ರಾಮಸ್ಥರು ಆತಿಥ್ಯ ನೀಡಿ ಸತ್ಕರಿಸುತ್ತಿದ್ದಾರೆ.
ತಾಲ್ಲೂಕಿನ ವಿವಿಧ ಹಳ್ಳಿಗಳ ಭಕ್ತರು ಸೇರಿದಂತೆ ಗದಗ, ಕೊಪ್ಪಳ ಜಿಲ್ಲೆಗಳ ಕೊಟ್ಟೂರೇಶ್ವರ ಸ್ವಾಮಿ ಭಕ್ತರು ತಂಡ ತಂಡವಾಗಿ ಪಾದಯಾತ್ರೆ ಹೊರಟಿದ್ದಾರೆ.
ಹೊಳಗುಂದಿಯ ಸಿದ್ದೇಶ್ವರ ಪ್ಲಾಟ್ನ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕೊಟ್ಟೂರೇಶ್ವರ ಟ್ರಸ್ಟ್ ನವರು ಪಾದಯಾತ್ರಿಗಳಿಗೆ 9ನೇ ವರ್ಷದ ಪ್ರಸಾದ ಸೇವೆ ಹಮ್ಮಿಕೊಂಡಿದ್ದಾರೆ. ನಿವೃತ್ತ ಶಿಕ್ಷಕ ಯು.ವೀರೇಶ, ಬಿ.ಶಿವಪ್ಪ, ಎಂ.ನಾಗರಾಜ, ಸಂತೋಷ, ಸಿದ್ದಪ್ಪ ಕಮ್ಮಾರ, ಡಿ.ಮಲ್ಲಿಕಾರ್ಜುನ, ಆನಂದ, ಯು.ಜೋಗಪ್ಪ, ಕಮ್ಮಾರ ಕೊಟ್ರೇಶ ಇದ್ದರು.
ಉತ್ತಂಗಿ ಕ್ರಾಸ್ನಲ್ಲಿ ಕೊಟ್ಟೂರೇಶ್ವರ ಪ್ರಸಾದ ಬಳಗದ ಗೆಳೆಯರು ಶಾಮಿಯಾನ ಹಾಕಿ ಪಾದಯಾತ್ರಿಗಳ ವಿಶ್ರಾಂತಿಗೆ ಅನುಕೂಲ ಮಾಡಿದ್ದಾರೆ. ಉಪಾಹಾರ, ಕುಡಿಯುವ ನೀರು, ವೈದ್ಯಕೀಯ ಶುಶ್ರೂಷೆ ವ್ಯವಸ್ಥೆ ಮಾಡಿದ್ದಾರೆ.
ಪಾದಯಾತ್ರಿಗಳ ಪ್ರಸಾದ ಸೇವೆಗೆ ಸೋಮಶಂಕರ ಸ್ವಾಮೀಜಿ ಚಾಲನೆ ನೀಡಿದರು. ವೈದ್ಯಾಧಿಕಾರಿ ಡಾ. ಗಂಗಾ, ಗ್ರಾಮ ಲೆಕ್ಕಾಧಿಕಾರಿ ಚೈತ್ರಾ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.