
ಕೊಟ್ಟೂರು: ಫೆ. 12 ರಂದು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ ನಡೆಯಲಿರುವ ಕಾರಣ ಭಾನುವಾರದಿಂದ ಧಾರ್ಮಿಕ ಕಾರ್ಯಗಳಿಗೆ ಚಾಲನೆ ದೊರೆಯಿತು.
ರಥದ ಗಡ್ಡೆಯ ಮೇಲೆ ಅಂಕಣ ಕಟ್ಟುವ ಕಾರ್ಯ ಭರದಿಂದ ಸಾಗಿದೆ. ಇದು ಪೂರ್ಣಗೊಂಡ ನಂತರ ಬೃಹತ್ ಜಲ್ಲಿಯನ್ನು ಅಳವಡಿಸಿ ಅದರ ಮೇಲೆ ಕಳಸ ಕೂಡಿಸುತ್ತಾರೆ. ಎಲ್ಲ ಅಂಕಣಗಳಿಗೂ ವಿವಿಧ ಬಣ್ಣಗಳ ಬಟ್ಟೆಗಳಿಂದ ಅಲಂಕರಿಸಿ ನಂತರ ಧ್ವಜಗಳು ಹಾಗೂ ದೇವರ ಭಾವಚಿತ್ರಗಳನ್ನು ರಥದ ಸುತ್ತ ಅಳವಡಿಸುತ್ತಾರೆ. ಬುಧವಾರ ಸಂಜೆ ವೇಳೆಗೆ ವಿವಿಧ ಬಗೆಯ ಪುಷ್ಪಗಳಿಂದ ಅಲಂಕರಿಸಿ ರಥವನ್ನು ಸಿದ್ಧಗೊಳಿಸುತ್ತಾರೆ ಕೋಟೆ ಪ್ರದೇಶದ ಆಯಗಾರ ಬಳಗದವರು.
ರಥ ಬೀದಿಯನ್ನು ಸ್ವಚ್ಛಗೊಳಿಸಿ ಸಮತಟ್ಟು ಮಾಡುವ ಕಾರ್ಯವನ್ನು ಸ್ಥಳೀಯ ಆಡಳಿತ ಕೈಗೊಂಡಿದ್ದು ಮೂಲ ಸೌಕರ್ಯ ಕಲ್ಪಿಸುವತ್ತ ಕಾರ್ಯನ್ಮೋಖವಾಗಿದೆ.
ಸ್ವಾಮಿಯ ದೇವಸ್ಥಾನಗಳಾದ ಹಿರೇಮಠ, ಗಚ್ಚಿನಮಠ, ತೊಟ್ಟಿಲುಮಠ, ಮೂರ್ಕಲ್ ಮಠ, ಮರಿಕೊಟ್ಟೂರೇಶ್ವರ ಮಠ ಸೇರಿದಂತೆ ರಥ ಬೀದಿಯು ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದು ತಳಿರು ತೋರಣ, ಬಾಳೆಕಂಬಗಳು ಹಾಗೂ ಹೂವಿನ ಹಾರಗಳಿಂದ ಅಲಂಕರಿಸುತ್ತಿರುವುದು ಕಂಡುಬರುತ್ತಿದೆ. ಈಗಾಗಲೇ ಹರಕೆ ಹೊತ್ತ ಭಕ್ತರು ಪೂಜೆ ಪುನಸ್ಕಾರ, ದೀಡು ನಮಸ್ಕಾರ ಸೇವೆ ಸಲ್ಲಿಸುತ್ತಿರುವುದು ಸಹ ಕಂಡುಬರುತ್ತಿದೆ.
ಫೆ. 8 ರಂದು ಬೆಳ್ಳಿ ರಥದಲ್ಲಿ ನಾಗರವಾಹನೋತ್ಸವ, 9ರಂದು ನವಿಲು ವಾಹನೋತ್ಸವ, 10 ರಂದು ಗಜ ವಾಹನೋತ್ಸವ, 11 ರಂದು ವೃಷಭ ವಾಹನೋತ್ಸವ ಹಾಗೂ 12 ರಂದು ಗುರುವಾರ ಮಹಾ ರಥೋತ್ಸವ, 13 ರಂದು ರಾತ್ರಿ ಮದಾಲ್ಸಿ, 15 ರಂದು ಮಹಾಶಿವರಾತ್ರಿ, 17 ರಂದು ಮಂಗಳವಾರ ಅಮವಾಸ್ಯೆ ಪೂಜಾ ಸಮಾರಂಭದೊಂದಿಗೆ ರಥೋತ್ಸವ ಸಂಪನಗೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.