
ಕುರುಗೋಡು ಉತ್ಸವದಲ್ಲಿ ಭಾಗವಹಿಸಿದ್ದ ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಘವೇಂದ್ರ, ಶಿವು ಮತ್ತು ತಂಡ ಹಾಸ್ಯ ಸನ್ನಿವೇಶ ಪ್ರದರ್ಶಿಸಿದರು
ಕುರುಗೋಡು: ಸರಿಗಮಪ ಖ್ಯಾತಿಯ ಶಿವಾನಿ ಅವರು ಭಕ್ತಿರಸದಲ್ಲಿ ಪ್ರಸ್ತುತಪಡಿಸಿದ ‘ಕೇಳೋ ಮಾದೇವ ಮನ್ಸನಾ ಜೀವಾ’ ಹಾಡು ಜನರನ್ನು ಮಂತ್ರಮುಗ್ಧಗೊಳಿಸಿತು.
ಚಂದನ್ ಶೆಟ್ಟಿ ಮತ್ತು ಅಲೋಕ್ ಬಾಬು ಹಾಡಿದ ‘ವಾರೆನೋಟ ನೋಡೈತೆ, ಕಾಲುಕೆರೆದು ನಿಂತೈತೆ’ ಹಾಡಿಗೆ ಪಡ್ಡೆ ಹುಡುಗರು ಖುರ್ಚಿಗಳ ಮೇಲೆ ನಿಂತು ಕೆಕ್ಕೆ ಹಾಕುತ್ತಾ ಹೆಜ್ಜೆಹಾಕಿದರು.
ಕುರುಗೋಡು ಉತ್ಸವದ ಅಂಗವಾಗಿ ಇಲ್ಲಿನ ದೊಡ್ಡಬಸವೇಶ್ವರ ವೇದಿಕೆಯಲ್ಲಿ ಸೋಮವಾರ ರಾತ್ರಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮದಲ್ಲಿ ಈ ದೃಶ್ಯ ಕಂಡುಬಂದಿತು.
ಬಾಳು ಬೆಳಗುಂದಿ ಅವರ ‘ಕುಣಿತಾಳೋ, ಕುಣಿತಾಳು.. ಮತ್ತು ಮಾಳು ನಿಪನಾಳ್ ಅವರ ‘ನಾ ಡ್ರೈವರ್, ನೀ ನನ್ನ ಲವ್ವರ’ ಹಾಡಿಗೆ ನೆರೆದಿದ್ದ ಜನರು ಶಿಳ್ಳೆ ಹಾಕಿ ಚಪ್ಪಾಳೆ ತಟ್ಟಿ ಕುಣಿದು ಕುಪ್ಪಳಿಸಿದರು.
ಕಾಮಿಡಿ ಕಿಲಾಡಿಗಳ ತಂಡದೊಂದಿಗೆ ನಿರೂಪಕಿ ಅನುಶ್ರೀ ಹಾಡಿದ ಪುನಿತ್ ರಾಜ್ ಕುಮಾರ್ ಅವರ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೆ ರಾಜಕುಮಾರ ಹಾಡಿಗೆ ಯುವಕರು ಮೊಬೈಲ್ ಟಾರ್ಚ್ ಆನ್ ಮಾಡಿ ಪ್ರೋತ್ಸಾಹಿಸಿದರು.
ಚಂದನ್ ಶೆಟ್ಟಿ ಹಾಡಿದ ಉಪೇಂದ್ರ ಅವರ ‘ಉಪ್ಪಿಗಿಂತ ರುಚಿ ಬೇರೆಯಿಲ್ಲ. ಒಪ್ಪಿಕೊಂಡೋರು ದಡ್ಡರಲ್ಲ’ ಹಾಡಿಗೆ ಶಾಸಕ ಜೆ.ಎನ್. ಗಣೇಶ್ ಹೆಜ್ಜೆಹಾಕಿದ್ದು ಗಮನಸೆಳೆಯಿತು.
ಕಾಮಿಡಿ ಕಿಲಾಡಿಗಳು ತಂಡದ ರಾಘವೇಂದ್ರ, ಶಿವು ಮತ್ತು ತಂಡದ ಸದಸ್ಯರು ಪ್ರಸ್ತತಪಡಿಸಿದ ಹಾಸ್ಯ ಸನ್ನಿವೇಶಗಳು ಜನರನ್ನು ಹಾಸ್ಯದ ಕಡದಲ್ಲಿ ತೇಲುವಂತೆ ಮಾಡಿತು.
ಮಧ್ಯರಾತ್ರಿ 1 ಗಂಟೆವರೆಗೆ ಜರುಗಿದ ರಸಮಂಜರಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸೊಬಗು ಕಣ್ತುಂಬಿಕೊಳ್ಳಲು ಜನರು ಚದುರದೆ ಕೂತಿದ್ದು ವಿಶೇಷವಾಗಿತ್ತು.
ಪ್ರಾರಂಭದಲ್ಲಿ ಸ್ಥಳೀಯ ಕಲಾವಿದರ ಕಲೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.