ADVERTISEMENT

ಪ್ರಯಾಣಿಕನಿಗೆ ಬ್ಯಾಗ್‌ ಮರಳಿಸಿದ ರೈಲ್ವೆ

ಸಾಮಾಜಿಕ ಜಾಲತಾಣದಿಂದ ಪ್ರಯಾಣಿಕನಿಗೆ ಸಿಕ್ಕಿದ ಕಳೆದುಹೋದ ಬ್ಯಾಗ್‌

​ಪ್ರಜಾವಾಣಿ ವಾರ್ತೆ
Published 11 ಜನವರಿ 2019, 14:49 IST
Last Updated 11 ಜನವರಿ 2019, 14:49 IST
ಹೊಸಪೇಟೆ ರೈಲು ನಿಲ್ದಾಣದ ಅಧಿಕಾರಿ ಉಮರ್‌ ಬಾನಿ ಅವರು ಪ್ರಯಾಣಿಕ ಸಾಯಿಕೃಷ್ಣ ಅವರಿಗೆ ಶುಕ್ರವಾರ ಬ್ಯಾಗ್‌ ಮರಳಿಸಿದರು
ಹೊಸಪೇಟೆ ರೈಲು ನಿಲ್ದಾಣದ ಅಧಿಕಾರಿ ಉಮರ್‌ ಬಾನಿ ಅವರು ಪ್ರಯಾಣಿಕ ಸಾಯಿಕೃಷ್ಣ ಅವರಿಗೆ ಶುಕ್ರವಾರ ಬ್ಯಾಗ್‌ ಮರಳಿಸಿದರು   

ಹೊಸಪೇಟೆ: ಸಾಮಾಜಿಕ ಜಾಲತಾಣದ ನೆರವಿನಿಂದ ಇಲ್ಲಿನ ರೈಲ್ವೆ ಇಲಾಖೆಯ ಅಧಿಕಾರಿಗಳು ಕಳೆದು ಹೋಗಿದ್ದ ಪ್ರಯಾಣಿಕನ ಬ್ಯಾಗ್‌ ಅನ್ನು ಪುನಃ ಆತನಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

’ಗುಂಟೂರಿನ ಸಾಯಿಕೃಷ್ಣ ಎಂಬುವರು ಜ. 1ರಂದು ವಾಸ್ಕೊಗೆ ರೈಲಿನಲ್ಲಿ ತೆರಳುತ್ತಿದ್ದರು. ರೈಲು ನಗರದ ನಿಲ್ದಾಣಕ್ಕೆ ಬಂದಾಗ ಪ್ರಯಾಣಿಕರೊಬ್ಬರು ಗಡಿಬಿಡಿಯಲ್ಲಿ ಸಾಯಿಕೃಷ್ಣ ಬ್ಯಾಗ್‌ ತನ್ನದೆಂದು ಭಾವಿಸಿ ಕೆಳಗಿಳಿದಿದ್ದಾರೆ. ನಂತರ ಬ್ಯಾಗ್‌ ತನ್ನದಲ್ಲ ಎಂಬುದನ್ನು ತಿಳಿದು, ಕಚೇರಿಯಲ್ಲಿ ಕೊಟ್ಟು ಹೋಗಿದ್ದಾರೆ. ಟಿಕೆಟ್‌ ಕಲೆಕ್ಟರ್‌ ಬ್ಯಾಗ್‌ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅದನ್ನು ನೋಡಿ ಶುಕ್ರವಾರ ಇಲ್ಲಿಗೆ ಬಂದಿದ್ದ ಸಾಯಿಕೃಷ್ಣ ಅವರು ಬ್ಯಾಗ್‌ ಪಡೆದುಕೊಂಡಿದ್ದಾರೆ’ ಎಂದು ನಿಲ್ದಾಣದ ಅಧಿಕಾರಿ ಉಮರ್‌ ಬಾನಿ ತಿಳಿಸಿದರು.

‘ಬ್ಯಾಗಿನಲ್ಲಿ ₹10 ಸಾವಿರ ನಗದು ಸೇರಿದಂತೆ ಬಟ್ಟೆ ಬರೆ ಇದ್ದವು. ಎಲ್ಲ ವಸ್ತುಗಳನ್ನು ಸುರಕ್ಷಿತವಾಗಿ ಅವರಿಗೆ ತಲುಪಿಸಿದ್ದೇವೆ. ಸಹಪ್ರಯಾಣಿಕ ಹಾಗೂ ಅಧಿಕಾರಿಗಳ ಕಾರ್ಯವೈಖರಿಗೆ ಸಾಯಿಕೃಷ್ಣ ಕೃತಜ್ಞತೆ ತಿಳಿಸಿ ಹೋದರು’ ಎಂದು ಬಾನಿ ಹೇಳಿದರು.

ADVERTISEMENT

ಆರ್‌.ಎಫ್‌.ಒ. ಸ್ವಪ್ನಾ ಚಾವ್ಲಾ, ರೈಲು ನಿಲ್ದಾಣದ ಮಾಸ್ಟರ್‌ ಶಿವರಾಜ್‌ ವೀಣಾ, ರೈಲ್ವೆ ಪೊಲೀಸ್‌ ಸಿಬ್ಬಂದಿ ಸಂತೋಷ, ಶರಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.