ಹೊಸಪೇಟೆ: ಡಾ. ಹಣಮಂತ ಗೋವಿಂದಪ್ಪ ದಡ್ಡಿ, ವೂಡೇ ಪಿ. ಕೃಷ್ಣ ಅವರು ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಗೌರವ ಪದವಿಗೆ ಆಯ್ಕೆಯಾಗಿದ್ದಾರೆ.
ನ. 10ರಂದು ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಆಯೋಜಿಸಿರುವ 28ನೇ ನುಡಿಹಬ್ಬದಲ್ಲಿ ನಾಡೋಜ ಪ್ರದಾನ ಮಾಡಲಾಗುತ್ತದೆ. ಜಮಖಂಡಿಯ ಹಣಮಂತ ದಡ್ಡಿ ಅವರಿಗೆ ವೈದ್ಯಕೀಯ ಕ್ಷೇತ್ರ ಮತ್ತು ಬೆಂಗಳೂರಿನ ವೂಡೇ ಪಿ. ಕೃಷ್ಣ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ನಾಡೋಜ ಗೌರವಕ್ಕೆ ಆಯ್ಕೆ ಮಾಡಲಾಗಿದೆ. ನಾಡೋಜ ಆಯ್ಕೆ ಸಮಿತಿಯು ಮೂವರ ಹೆಸರನ್ನು ಶಿಫಾರಸು ಮಾಡಿತು. ಈ ಪೈಕಿ ರಾಜ್ಯಪಾಲರು ಇಬ್ಬರ ಹೆಸರು ಅಂತಿಮಗೊಳಿಸಿದ್ದಾರೆ.
ನ. 10ರ ಬೆಳಿಗ್ಗೆ 11ಕ್ಕೆ ನಡೆಯ ಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ, ಉಪಮುಖ್ಯ ಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಅವರು ಇಬ್ಬರಿಗೆ ಡಿ.ಲಿಟ್, 74 ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮತ್ತು 32 ವಿದ್ಯಾರ್ಥಿಗಳಿಗೆ ಎಂ.ಫಿಲ್ ಪದವಿ ಪ್ರದಾನ ಮಾಡುವರು. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ (ನ್ಯಾಕ್) ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ಘಟಿಕೋತ್ಸವ ಭಾಷಣ ಮಾಡುವರು. ಕುಲಪತಿ ಪ್ರೊ.ಸ.ಚಿ. ರಮೇಶ ಉಪಸ್ಥಿತರಿರುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.