ಸಂಡೂರು: ‘ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಗಳ ಬಡ ಜನರ ಉತ್ತಮ ಆರೋಗ್ಯಕ್ಕೆ ನೂತನ ಡಯಾಲಿಸಿಸ್ ಯಂತ್ರಗಳು ಬಹಳ ಅನುಕೂಲವಾಗಿದ್ದು, ಎಲ್ಲ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಂಸದ ಇ.ತುಕಾರಾಂ ಹೇಳಿದರು.
ಪಟ್ಟಣದ 100 ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಜಿಂದಾಲ್ ಫೌಂಡೇಶನ್ ವತಿಯಿಂದ ಸಿಎಸ್ಆರ್ ಚಟುವಟಿಕೆಯಲ್ಲಿ ನೀಡಿದ ಎರಡು ನೂತನ ಡಯಾಲಿಸಿಸ್ ಯಂತ್ರಗಳ ಸೇವೆಗೆ ಚಾಲನೆ ಮಾತನಾಡಿದರು.
‘ಆರ್ಥಿಕವಾಗಿ ಹಿಂದುಳಿದ ಬಡ ರೋಗಿಗಳಿಗೆ ಈ ಯಂತ್ರಗಳ ಮೂಲಕ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ. ಒಂದು ವರ್ಷಕ್ಕೆ ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ಒದಗಿಸಬಹುದು. ಆಸ್ಪತ್ರೆಯ ಅಧಿಕಾರಿ, ಸಿಬ್ಬಂದಿಗಳು ನೂತನ ಯಂತ್ರಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿ ಜನರಿಗೆ ಸಕಾಲಕ್ಕೆ ಸೇವೆ ಒದಗಿಸಬೇಕು’ ಎಂದು ಹೇಳಿದರು.
ಶಾಸಕಿ ಅನ್ನಪೂರ್ಣ ತುಕಾರಾಂ, ಸಂಡೂರು ಪುರಸಭೆಯ ಅಧ್ಯಕ್ಷ ಸಿರಾಜ್ಹುಸೇನ್, ಉಪಾಧ್ಯಕ್ಷೆ ಲತಾ, ತಹಶೀಲ್ದಾರ್ ಅನಿಲ್ಕುಮಾರ್ ಜಿ. ತಾಲ್ಲೂಕು ಪಂಚಾಯಿತಿ ಎಡಿಸಿ ರೇಣುಕಾಚಾರ್ಯಸ್ವಾಮಿ, ಜಿಂದಾಲ್ ನ ಮುಖ್ಯಸ್ಥ ಪೆದ್ದಣ್ಣ, ಆಸ್ಪತ್ರೆ ಅಧಿಕಾರಿ, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.