ಹಗರಿಬೊಮ್ಮನಹಳ್ಳಿ: ಪಟ್ಟಣದ ರಾಘವೇಂದ್ರ ಕಾಲೊನಿ ಅಸ್ತಿತ್ವಕ್ಕೆ ಬಂದು ಎರಡು ದಶಕ ಕಳೆದರೂ ಕನಿಷ್ಠ ಮೂಲ ಸೌಕರ್ಯ ಸ್ಥಳೀಯರಿಗೆ ಸಿಕ್ಕಿಲ್ಲ.
ಮೂಲಸೌಲಭ್ಯಕ್ಕಾಗಿ ಸ್ಥಳೀಯರು 22 ವರ್ಷಗಳಿಂದ ಸಂಬಂಧಿಸಿದವರಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಯಾರೊಬ್ಬರೂ ಅದನ್ನು ಕಿವಿಗೆ ಹಾಕಿಕೊಂಡಿಲ್ಲ. ಚುನಾವಣೆಯಲ್ಲಿ ಭರವಸೆ ಕೊಟ್ಟು ಹೋಗುವವರು ಮತ್ತೊಂದು ಚುನಾವಣೆ ವರೆಗೆ ಈ ಕಡೆ ಇಣುಕಿಯೂ ನೋಡುವುದಿಲ್ಲ ಎನ್ನುವುದು ಸ್ಥಳೀಯರ ಆರೋಪ.
ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿಗೆ ವ್ಯವಸ್ಥೆ ಇಲ್ಲ. ಕಾಲೊನಿಯಲ್ಲಿ ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳೇ ಹೆಚ್ಚಿದ್ದಾರೆ. ಇದಕ್ಕೆ ಹೊಂದಿಕೊಂಡಿರುವ ಶಿಕ್ಷಕರ ಕಾಲೊನಿಯಲ್ಲಿ ಎಲ್ಲ ಮೌಲ ಸೌಕರ್ಯಗಳಿವೆ, ಆದರೆ, ರಾಘವೇಂದ್ರ ಕಾಲೊನಿ ನಿರ್ಲಕ್ಷ್ಯಿಸಲಾಗಿದೆ ಎಂದು ಸ್ಥಳೀಯರಾದ ಎಲ್.ರೆಡ್ಡಿನಾಯ್ಕ, ಶಾಂತನಗೌಡ, ಪೋಮ್ಯಾನಾಯ್ಕ, ಕರಿಗೌಡರ ಹೇಳಿದರು.
ಕಾಲೊನಿಯ ರಸ್ತೆಗಳು ಡಾಂಬರ್ ಕಂಡಿಲ್ಲ. ಚರಂಡಿ ನಿರ್ಮಾಣವಾಗದ ಕಾರಣ ಹೊಲಸು ನೀರು ರಸ್ತೆ ಮಧ್ಯದಲ್ಲಿಯೇ ಹರಿಯುತ್ತದೆ. ಕೆಲವೆಡೆ ನಿರ್ಮಾಣಗೊಂಡರೂ ಅರೆಬರೆ ಕಾಮಗಾರಿಯಿಂದ ಸರಾಗವಾಗಿ ನೀರು ಹರಿಯುವುದಿಲ್ಲ. ಎಲ್ಲೆಡೆ ದುರ್ವಾಸನೆ ಇದೆ. ಸೊಳ್ಳೆ ಕಾಟಕ್ಕೆ ಜನ ಬೇಸತ್ತಿದ್ದಾರೆ. ಕಾಲೊನಿಯಲ್ಲಿ ಉದ್ಯಾನವನಕ್ಕಾಗಿ ಮೀಸಲಿಟ್ಟಿರುವ ನಿವೇಶನದಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲಾಗಿದೆ. ಮಿಕ್ಕುಳಿದ ಜಾಗದಲ್ಲಿ ಉದ್ಯಾನವನ ತಲೆ ಎತ್ತಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.