ADVERTISEMENT

‘ಮನಸ್ಸು, ಶರೀರದ ಸ್ವಾಸ್ಥ್ಯಕ್ಕೆ ಯೋಗ ಸಹಕಾರಿ’

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 9:19 IST
Last Updated 12 ಜೂನ್ 2021, 9:19 IST
ಶನಿವಾರ ಆರಂಭಗೊಂಡ ಶಿಬಿರದಲ್ಲಿ ಪತಂಜಲಿ ಸಮಿತಿಯವರು ಆನ್‌ಲೈನ್‌ನಲ್ಲಿ ಉಚಿತವಾಗಿ ಯೋಗ ಹೇಳಿಕೊಟ್ಟರು
ಶನಿವಾರ ಆರಂಭಗೊಂಡ ಶಿಬಿರದಲ್ಲಿ ಪತಂಜಲಿ ಸಮಿತಿಯವರು ಆನ್‌ಲೈನ್‌ನಲ್ಲಿ ಉಚಿತವಾಗಿ ಯೋಗ ಹೇಳಿಕೊಟ್ಟರು   

ಹೊಸಪೇಟೆ (ವಿಜಯನಗರ): ವಿಶ್ವ ಯೋಗ ದಿನದ ಪ್ರಯುಕ್ತ ಪತಂಜಲಿ ಯೋಗ ಸಮಿತಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿರುವ ಉಚಿತ ಯೋಗ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಜೂ. 21ರ ವರೆಗೆ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಅದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಶಿಬಿರ ಉದ್ಘಾಟಿಸಿ ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ, ‘ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಸಕ್ತ ವರ್ಷದಿಂದ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಹೇಳಿದರು.

‘ಕೋವಿಡ್‌ ಕಾಲಘಟ್ಟದಲ್ಲಿ ನಮ್ಮ ಶರೀರ ಮತ್ತು ಮನಸ್ಸು ಸ್ವಸ್ಥವಾಗಿಡಲು, ಖಿನ್ನತೆ ದೂರ ಮಾಡಲು ಆಸನ-ಪ್ರಾಣಾಯಾಮ-ಧ್ಯಾನ ಬಹಳ ಮುಖ್ಯ. ಪ್ರತಿಯೊಬ್ಬರು ನಿತ್ಯ ಯೋಗ ಮಾಡಬೇಕು. ಯೋಗಾಭ್ಯಾಸ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು’ ಎಂದು ತಿಳಿಸಿದರು.

ADVERTISEMENT

‘ಯೋಗ ಶಿಕ್ಷಣಕ್ಕಾಗಿಯೇ ಕನ್ನಡ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಯೋಗ ಅಧ್ಯಯನ ವಿಭಾಗವನ್ನು ಎರಡು ವರ್ಷಗಳ ಹಿಂದೆಯೇ ಆರಂಭಿಸಲಾಗಿದೆ. ಯೋಗ ಸರ್ಟಿಫಿಕೇಟ್, ಡಿಪ್ಲೊಮಾ ಮತ್ತು ಎಂ.ಎಸ್ಸಿ. ಸ್ನಾತಕೊತ್ತರ ಕೋರ್ಸ್‌ ಆರಂಭಿಸಲಾಗಿದೆ’ ಎಂದರು.

ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ, ‘ಬಹಳಷ್ಟು ಜನರು ಕಾಯಿಲೆಗಳಿಗೆ ತುತ್ತಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಕಾಯಿಲೆ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಅದಕ್ಕೆ ಯೋಗಾಸನ , ಪ್ರಾಣಾಯಾಮ, ಧ್ಯಾನ ಬಹಳಷ್ಟು ಸಹಕಾರಿಯಾಗುತ್ತದೆ’ ಎಂದು ತಿಳಿಸಿದರು.

ಯೋಗ ಅಧ್ಯಯನ ವಿಭಾಗದ ನಿರ್ದೇಶಕ ಎಫ್.ಟಿ.ಹಳ್ಳಿಕೇರಿ, ಪತಂಜಲಿ ಯೋಗ ಸಮಿತಿಯ ಪದಾಧಿಕಾರಿಗಳಾದ ದಾಕ್ಷಾಯಣಿ ಶಿವಕುಮಾರ, ಬಾಲಚಂದ ಶರ್ಮಾ, ಕಿರಣಕುಮಾರ್, ಕೃಷ್ಣ ನಾಯಕ, ವೀರೇಶ ಕನಕೇರಿಮಠ, ವಿಠೋಬಾ ಬಲ್ಲೂರ, ಜಯಶ್ರೀ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.