ಹೊಸಪೇಟೆ (ವಿಜಯನಗರ): ಅವ್ಯವಸ್ಥೆಯ ಗೂಡಾಗಿರುವ ನಗರದ 24ನೇ ವಾರ್ಡಿನ ಮೆಹಬೂಬ್ ನಗರಕ್ಕೆ ಬುಧವಾರ ಬೆಳಿಗ್ಗೆ ನಗರಸಭೆ ಪರಿಸರ ಎಂಜಿನಿಯರ್ ಆರತಿ ಭೇಟಿ ನೀಡಿದರು.
'ಅವ್ಯವಸ್ಥೆ ನಡುವೆ ಸಾಗಿದೆ ಬದುಕು' ಶೀರ್ಷಿಕೆ ಅಡಿ ಬುಧವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಚರಂಡಿ ಅವ್ಯವಸ್ಥೆ ಕಂಡು, ನಗರಸಭೆಯ ಪೌರಕಾರ್ಮಿಕರನ್ನು ಸ್ಥಳಕ್ಕೆ ಕರೆಸಿಕೊಂಡು ಅವರಿಂದ ಸ್ವಚ್ಛತೆಗೆ ಏರ್ಪಾಟು ಮಾಡಿದರು. ಸಂಪೂರ್ಣ ಕೆಲಸ ಮುಗಿಯುವವರೆಗೆ ಸ್ಥಳದಲ್ಲಿಯೇ ಇದ್ದರು. ತ್ಯಾಜ್ಯವನ್ನು ಬೇರೆಡೆ ಸಾಗಿಸಲು ಸೂಚಿಸಿದರು. ಬಳಿಕ ಕೆಟ್ಟು ಹೋದ ರಸ್ತೆಗಳನ್ನು ವೀಕ್ಷಿಸಿದರು.
‘ಅನೇಕ ವರ್ಷಗಳ ಹಿಂದೆ ನಿರ್ಮಿಸಿರುವ ಚರಂಡಿಗಳು ಹಾಳಾಗಿವೆ. ಮತ್ತೆ ಎರಡು ದಿನ ಬಿಟ್ಟರೆ ತುಂಬಿ ಹರಿಯುತ್ತವೆ. ಹೊಸದಾಗಿ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು’ ಎಂದು ಸ್ಥಳೀಯರು ತಿಳಿಸಿದರು. ‘ಈ ಕುರಿತು ಮೇಲಧಿಕಾರಿ ಜತೆ ಚರ್ಚಿಸಿ ಆದಷ್ಟು ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು’ ಎಂದು ಆರತಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.