ADVERTISEMENT

ಹೊರಗೆ ಬಂದ ಜನ: ಅಗತ್ಯ ವಸ್ತು ಖರೀದಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 10:35 IST
Last Updated 26 ಏಪ್ರಿಲ್ 2021, 10:35 IST
ವಾರಾಂತ್ಯದ ಕರ್ಫ್ಯೂ ಮುಗಿದ ನಂತರ ಸೋಮವಾರ ಹೊಸಪೇಟೆಯ ಮೇನ್‌ ಬಜಾರ್‌ನಲ್ಲಿ ಜನರ ಓಡಾಟ ಹೆಚಾಗಿತ್ತು
ವಾರಾಂತ್ಯದ ಕರ್ಫ್ಯೂ ಮುಗಿದ ನಂತರ ಸೋಮವಾರ ಹೊಸಪೇಟೆಯ ಮೇನ್‌ ಬಜಾರ್‌ನಲ್ಲಿ ಜನರ ಓಡಾಟ ಹೆಚಾಗಿತ್ತು   

ಹೊಸಪೇಟೆ (ವಿಜಯನಗರ): ವಾರಾಂತ್ಯದ ಕರ್ಫ್ಯೂ ಅವಧಿ ಮುಗಿಯುತ್ತಿದ್ದಂತೆ ಸೋಮವಾರ ಬೆಳಿಗ್ಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಕಂಡು ಬಂತು.

ಶನಿವಾರ ಹಾಗೂ ಭಾನುವಾರ ಬೆಳಿಗ್ಗೆ ಆರರಿಂದ ಹತ್ತು ಗಂಟೆಯ ವರೆಗೆ ಅಗತ್ಯ ವಸ್ತು ಖರೀದಿಸಲಷ್ಟೇ ಅವಕಾಶ ಇತ್ತು. ಎಲ್ಲ ರೀತಿಯ ವಾಣಿಜ್ಯ ವಹಿವಾಟು ಕೂಡ ಸ್ಥಗಿತಗೊಂಡಿತ್ತು. ಆದರೆ, ಸೋಮವಾರ ಕರ್ಫ್ಯೂ ಮುಗಿಯುತ್ತಿದ್ದಂತೆ ಜನ ಸಾಕಷ್ಟು ಸಂಖ್ಯೆಯಲ್ಲಿ ಹೊರಗೆ ಕಾಣಿಸಿಕೊಂಡರು.

ನಗರದಲ್ಲಿ ಆರಂಭಿಸಲಾಗಿರುವ ಆರು ತಾತ್ಕಾಲಿಕ ಮಾರುಕಟ್ಟೆ, ಮಾಂಸದ ಅಂಗಡಿ, ದಿನಸಿ ಅಂಗಡಿಗಳಲ್ಲಿ ಹೆಚ್ಚಿನ ಜನ ಕಾಣಿಸಿಕೊಂಡರು. ಕಟ್ಟಡ ನಿರ್ಮಾಣ ಕಾರ್ಮಿಕರು, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿ ಕಾರ್ಮಿಕರು, ದೈನಂದಿನ ಕಚೇರಿ ಕೆಲಸಕ್ಕೆ ಜನ ತೆರಳಿದರು.

ADVERTISEMENT

ಇನ್ನು, ನಗರದ ತಾಲ್ಲೂಕು ಕಚೇರಿ, ನಗರಸಭೆಯ ಆವರಣದಲ್ಲೂ ಜನ ಕಂಡು ಬಂದರು. ಆಸ್ತಿ ನೋಂದಣಿ, ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ ಹೀಗೆ ಇತರೆ ಕಚೇರಿ ಕೆಲಸಕ್ಕಾಗಿ ಗ್ರಾಮೀಣ ಪ್ರದೇಶಗಳಿಂದ ಜನ ಬಂದಿದ್ದರು. ಮಧ್ಯಾಹ್ನ ಬಿಸಿಲು ಏರುತ್ತಿದ್ದಂತೆ ಜನರ ಓಡಾಟ ನಿಧಾನವಾಗಿ ಕಡಿಮೆಯಾಯಿತು. ಪ್ರಮುಖ ರಸ್ತೆಗಳಲ್ಲಿ ವಾಹನಗಳ ಓಡಾಟ ತಗ್ಗಿತು. ಬಟ್ಟೆ ಅಂಗಡಿಗಳನ್ನು ತೆರೆಯಲು ಪೊಲೀಸರು ಅವಕಾಶ ಕಲ್ಪಿಸಲಿಲ್ಲ.

ಮಂಗಳವಾರ (ಏ.27) ರಾತ್ರಿಯಿಂದ 14 ದಿನಗಳ ವರೆಗೆ ಲಾಕ್‌ಡೌನ್‌ ಘೋಷಿಸಿರುವ ಸುದ್ದಿ ಸೋಮವಾರ ಮಧ್ಯಾಹ್ನ ಹೊರಬೀಳುತ್ತಿದ್ದಂತೆ ಜನ ಅಗತ್ಯ ವಸ್ತುಗಳ ಖರೀದಿಗೆ ಪುನಃ ಮಾರುಕಟ್ಟೆ, ಅಂಗಡಿಗಳತ್ತ ದೌಡಾಯಿಸಿದರು. ಎರಡು ವಾರಕ್ಕೆ ಸಾಕಾಗುವಷ್ಟು ದಿನಸಿ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಿ ಕೊಂಡೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.