ಹೊಸಪೇಟೆ: ಇಲ್ಲಿನ ತುಂಗಭದ್ರಾ ಅಣೆಕಟ್ಟೆಯಲ್ಲಿ ಸೋಮವಾರ ಸಂಭ್ರಮ ಮನೆ ಮಾಡಿತ್ತು. ವಿವಿಧ ಕಡೆಗಳಿಂದ ಜನ ಬಂದದ್ದರಿಂದ ದಿನವಿಡೀ ಜನಜಾತ್ರೆ ಕಂಡು ಬಂತು.
ಜಲಾಶಯದ ಎಲ್ಲ ಕ್ರಸ್ಟ್ಗೇಟ್ ತೆರೆದು ನದಿಗೆ ನೀರು ಹರಿಸುತ್ತಿರುವ ಮನಮೋಹಕ ದೃಶ್ಯ ಕಣ್ತುಂಬಿಕೊಳ್ಳಲು ವಿವಿಧ ಭಾಗಗಳಿಂದ ಜನ ಬರುತ್ತಿದ್ದಾರೆ. ಅದರಲ್ಲೂ ರೈತರು ತುಂಗಭದ್ರೆ ತಾಯಿಗೆ ನಮಿಸಲು ಬರುತ್ತಿದ್ದಾರೆ.
ಎರಡನೇ ಶನಿವಾರ, ಭಾನುವಾರ ಹಾಗೂ ಬಕ್ರೀದ್ ನಿಮಿತ್ತ ಸೋಮವಾರ ರಜೆ ಇತ್ತು. ಸಾಲು ಸಾಲು ರಜೆ ಬಂದದ್ದರಿಂದ ಜನ ಅಣೆಕಟ್ಟೆ ಹಾಗೂ ಹಂಪಿ ಬಂದಿದ್ದರು. ಎಲ್ಲೆಡೆಯಿಂದ ಜನ ಬಂದದ್ದರಿಂದ ದಟ್ಟಣೆ ಕಂಡು ಬಂತು. ಅಣೆಕಟ್ಟೆಯ ಮುಂಭಾಗ, ಪಾರ್ಕಿಂಗ್ ಜಾಗ ವಾಹನಗಳು ಭರ್ತಿಯಾಗಿತ್ತು. ಜಲಾಶಯದ ಮುಖ್ಯ ಪ್ರವೇಶದ್ವಾರದಿಂದ ತಿರುಮಲ ಉದ್ಯಾನದ ವರೆಗೆ ಜನಜಂಗುಳಿ ಕಂಡು ಬಂತು.
ರಾಷ್ಟ್ರೀಯ ಹೆದ್ದಾರಿ 50ರ ಸೇತುವೆ ಮೇಲೆ ನಿಂತುಕೊಂಡು ಜನ ನೀರು ಹರಿದು ಹೋಗುತ್ತಿರುವುದನ್ನು ಕಣ್ತುಂಬಿಕೊಂಡರು. ಸೆಲ್ಫಿ, ಛಾಯಾಚಿತ್ರ ತೆಗೆದುಕೊಂಡು ಸಂಭ್ರಮಿಸಿದರು. ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮವಿರಲು ಪೊಲೀಸರು ದಿನವಿಡೀ ಪರದಾಟ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.