ADVERTISEMENT

ವೃತ್ತಿ ರಂಗಭೂಮಿ ಬೆಳೆಸಿದ್ದು ಪುಟ್ಟರಾಜರು: ‌ಕೆ. ರವೀಂದ್ರನಾಥ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2021, 12:45 IST
Last Updated 3 ಮಾರ್ಚ್ 2021, 12:45 IST
ಗಾನಯೋಗಿ ಕವಿ ಗವಾಯಿ ಪುಟ್ಟರಾಜರ ಜಯಂತಿ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು
ಗಾನಯೋಗಿ ಕವಿ ಗವಾಯಿ ಪುಟ್ಟರಾಜರ ಜಯಂತಿ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು   

ವಿಜಯನಗರ (ಹೊಸಪೇಟೆ): ‘ಗಾನಯೋಗಿ ಕವಿ ಗವಾಯಿ ಪುಟ್ಟರಾಜರು ವೃತ್ತಿ ರಂಗಭೂಮಿ ಕಲೆಯ ಶ್ರೇಯೋಭಿವೃದ್ದಿಗೆ ಕಾರಣೀಕರ್ತರು. ಅವರು ನಡೆದಾಡುವ ದೇವರಾಗಿದ್ದರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಲಲಿತಕಲಾ ನಿಕಾಯದ ಡೀನ್‌ ‌ಕೆ. ರವೀಂದ್ರನಾಥ ತಿಳಿಸಿದರು.

ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಪುಟ್ಟರಾಜ ಗವಾಯಿಗಳವರ 107 ನೇ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು.

‘ಗುರು ಪುಟ್ಟರಾಜರು ವೀರೇಶ್ವರ ಪುಣ್ಯಾಶ್ರಮದಲ್ಲಿ ಅಂಧ, ಅನಾಥ ಮಕ್ಕಳ ಬಾಳಿಗೆ ಬೆಳಕಾದವರು. ಅಲ್ಲೇ ಹಿಂದೂಸ್ತಾನಿ ಸಂಗೀತ ಕಲಿಯಲು ಅನುವು ಮಾಡಿಕೊಟ್ಟವರು. ಸ್ವತಃ ಸಾಹಿತಿಗಳಾಗಿ ಉತ್ತಮ ವಾಜ್ಮಿಗಳಾಗಿದ್ದರು’ ಎಂದು ಸ್ಮರಿಸಿದರು.

ADVERTISEMENT

ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥ ಗೋವಿಂದ, ‘ನಡೆದಾಡುವ ದೇವರೆಂದು ಖ್ಯಾತಿ ಹೊಂದಿದ ಪುಟ್ಟರಾಜರು ಗಾನ ಗಾರುಡಿಗರಾಗಿ ವಿಶ್ವಮಾನ್ಯರಾದವರು. ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಇದ್ದಾರೆ’ ಎಂದು ತಿಳಿಸಿದರು.

ಸಂಗೀತ ವಿಭಾಗದ ವಿದ್ಯಾರ್ಥಿಗಳು ಪುಟ್ಟರಾಜ ಗವಾಯಿಗಳು ರಚಿಸಿದ ಸ್ತುತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.