ADVERTISEMENT

ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ರೈತ ಸಂಘ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 15:14 IST
Last Updated 28 ಮಾರ್ಚ್ 2024, 15:14 IST
ಸಾಲ ಮರುಪಾವತಿ ವಿಚಾರವಾಗಿ ಗ್ರಾಮೀಣ ಬ್ಯಾಂಕುಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕೆಂದು ಆಗ್ರಹಿಸಿ ಬಳ್ಳಾರಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮುಖ್ಯ ಕಚೇರಿಗೆ ರೈತ ಹೋರಾಟಗಾರರು ಶುಕ್ರವಾರ ಮುತ್ತಿಗೆ ಹಾಕಿದರು
ಸಾಲ ಮರುಪಾವತಿ ವಿಚಾರವಾಗಿ ಗ್ರಾಮೀಣ ಬ್ಯಾಂಕುಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕೆಂದು ಆಗ್ರಹಿಸಿ ಬಳ್ಳಾರಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮುಖ್ಯ ಕಚೇರಿಗೆ ರೈತ ಹೋರಾಟಗಾರರು ಶುಕ್ರವಾರ ಮುತ್ತಿಗೆ ಹಾಕಿದರು    

ಬಳ್ಳಾರಿ: 'ರಾಜ್ಯದ ಎಲ್ಲಾ ಗ್ರಾಮೀಣ ಬ್ಯಾಂಕಗಳಲ್ಲಿ ಎಸ್‌ಬಿಎಂ ರೀತಿ ಒಟಿಎಸ್ ಸಾಲ ತಿರುವಳಿ ಪದ್ಧತಿ ಜಾರಿಗೆ ತರಬೇಕು, ರೈತರಿಂದ ಸಾಲ ವಸೂಲಿಗಾಗಿ ನ್ಯಾಯಾಲಯಗಳಲ್ಲಿ ದಾಖಲಿಸಿರುವ ಕೇಸುಗಳನ್ನು ವಾಪಸ್ ಪಡೆಯಬೇಕು, ರೈತರು ಗಿರಿವಿ ಇಟ್ಟಿರುವ ಚಿನ್ನಾಭರಣಗಳನ್ನು ಕೃಷಿ ಸಾಲದ ನೆಪ ಹೇಳದೆ ಕೂಡಲೇ ಬಿಡುಗಡೆ ಮಾಡಬೇಕು’ ಎಂದು  ರಾಜ್ಯ ರೈತ ಸಂಘ ಒತ್ತಾಯಿಸಿದೆ.  

ಸಾಲ ಮರುಪಾವತಿ ವಿಚಾರವಾಗಿ ಗ್ರಾಮೀಣ ಬ್ಯಾಂಕುಗಳಿಂದ ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕೆಂದು ಆಗ್ರಹಿಸಿ ಬಳ್ಳಾರಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮುಖ್ಯ ಕಚೇರಿಗೆ  ರೈತ ಹೋರಾಟಗಾರರು ಶುಕ್ರವಾರ ಮುತ್ತಿಗೆ ಹಾಕಿದರು. 

ಈ ವೇಳೆ ಮಾತನಾಡಿದ ರಾಜ್ಯ ರೈತ ಸಂಘದ ‌ಅಧ್ಯಕ್ಷ ಮಾದವರೆಡ್ಡಿ, ‌‘ಎರಡು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಗ್ರಾಮೀಣ ಬ್ಯಾಂಕ್‌ ನಿರ್ಲಕ್ಷ್ಯ ವಹಿಸಿದೆ. ಶ್ರೀಮಂತ ಉದ್ಯಮಿಗಳಿಗೆ ಹೆಚ್ಚು ಸಾಲ ನೀಡಿ ಗ್ರಾಮೀಣ ಜನರ ಪರ ಎಂದು ಬಿಂಬಿಸಿಕೊಳ್ಳುತ್ತಿದೆ ಇದು ರೈತ ದ್ರೋಹದ ಕೆಲಸ’ ಎಂದರು. 

ADVERTISEMENT

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ‘ಬಂಡವಾಳ ಶಾಹಿಗಳ ₹14 ಲಕ್ಷ ಕೋಟಿ ಸಾಲ ಮನ್ನ ಮಾಡುವ ಕೇಂದ್ರ ಸರ್ಕಾರಕ್ಕೆ ರೈತರ ಸಾಲ ಮನ್ನ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಗಾರರಿಂದ ಮನವಿ ಸ್ವೀಕರಿಸಿದ ಬ್ಯಾಂಕ್‌ ಜನರಲ್ ಮ್ಯಾನೇಜರ್ ಶಿವಶಂಕರ್ ಮಾತನಾಡಿ, ‘ಏ. 2 ರಂದು ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಸಮ್ಮುಖದಲ್ಲಿ ರೈತ ಮುಖಂಡರ ಸಭೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು’ ಎಂದು ಭರವಸೆ ನೀಡಿದರು. 

ಕರ್ನಾಟಕ ರಾಜ್ಯರೈತ ಸಂಘದ ಮಂಜೇಗೌಡ,  ಬಲ್ಲೂರ್ ರವಿಕುಮಾರ್, ಹತ್ತಳ್ಳಿ ದೇವರಾಜ್ ಲಕ್ಷ್ಮಿದೇವಿ, ಮಲ್ಲಿಕಾರ್ಜುನರೆಡ್ಡಿ ವಕೀಲರು, ಎನ್ ಎಚ್ ದೇವಕುಮಾರ  ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.