ಹೂವಿನಹಡಗಲಿ: ಜಾತಿಗಣತಿಯಲ್ಲಿ ಕ್ರಿಶ್ಚಿಯನ್ ಜತೆಗೆ ಹಿಂದೂ ಜಾತಿಗಳ ಸೇರ್ಪಡೆಗೆ ಅವಕಾಶ ಕಲ್ಪಿಸಿಕೊಡುವ ಮೂಲಕ ರಾಜ್ಯ ಸರ್ಕಾರ ಕ್ರಿಶ್ಚಿಯನ್ ಮತಾಂತರಕ್ಕೆ ಕುಮ್ಮಕ್ಕು ನೀಡಿದೆ ಎಂದು ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಈಟಿ. ಲಿಂಗರಾಜ ಆರೋಪಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ಕ್ರಿಶ್ಚಿಯನ್ ಕುರುಬ ಹಾಗೂ ಇತರೆ ಜಾತಿಗಳನ್ನು ಕ್ರಿಶ್ಚಿಯನ್ ಧರ್ಮದ ಜತೆ ಸೇರಿಸಲು ಅವಕಾಶ ನೀಡಿ ರಾಜ್ಯದಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ ಹೆಚ್ಚು ತೋರಿಸುವ ಹುನ್ನಾರವಾಗಿದೆ. ರಾಹುಲ್ ಗಾಂಧಿ ಓಲೈಕೆಗಾಗಿ ಕ್ರಿಶ್ಚಿಯನ್ ಜತೆಗೆ ಕೆಲವು ಜಾತಿಗಳನ್ನು ಸೇರಿಸಿ ಹಿಂದೂ ಧರ್ಮ ಒಡೆಯಲಾಗುತ್ತಿದೆ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯ ಅವರು ಈ ಹಿಂದೆ ಸರ್ಕಾರದ ಕೋಟ್ಯಂತರ ಹಣ ಖರ್ಚು ಮಾಡಿ ಜಾತಿ ಗಣತಿ ಮಾಡಿಸಿದ್ದಾರೆ. ಮುಂದಿನ ವರ್ಷ ಕೇಂದ್ರ ಸರ್ಕಾರ ಜಾತಿ ಗಣತಿ ನಡೆಸುತ್ತಿದ್ದರೂ, ರಾಜ್ಯ ಸರ್ಕಾರ ಮತ್ತೆ ಅದಕ್ಕೆ ಚಾಲನೆ ನೀಡಿ, ಜನರ ತೆರಿಗೆ ಹಣ ಪೋಲು ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಜಾತಿ ಗಣತಿಯಲ್ಲಿ ಕ್ರಿಶ್ಚಿಯನ್ ಜತೆ ಹಿಂದೂ ಜಾತಿಗಳನ್ನು ಸೇರಿಸುವ ಕಾಲಂನ್ನು ರದ್ದುಪಡಿಸಬೇಕು. ಹಲವು ನೂನ್ಯತೆಗಳನ್ನು ಸರಿಪಡಿಸಿ, ಗಣತಿಯನ್ನು ವೈಜ್ಞಾನಿಕವಾಗಿ ನಡೆಸಿ ವರದಿಯನ್ನು ರಾಜ್ಯದ ಜನರ ಮುಂದೆ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.