ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಸಿರುಗುಪ್ಪದ ಸರ್ಕಾರಿ ಕೈಗಾರಿಕೆ ತರಬೇತಿ ಕಾಲೇಜು (ಐಟಿಐ) ಸ್ಥಾಪನೆಯಾಗಿ 11 ವರ್ಷಗಳಾದರೂ ಸ್ವಂತ ಕಟ್ಟಡವಿಲ್ಲದೆ, ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದ ಗೋದಾಮಿನಲ್ಲಿ ನಡೆಯುತ್ತಿದೆ.
2014ರಲ್ಲಿ ಪ್ರಾರಂಭಗೊಂಡ ಕಾಲೇಜಿನಲ್ಲಿ ಎಲೆಕ್ಟ್ರಿಷಿಯನ್ ಮತ್ತು ಫಿಟ್ಟರ್ ವಿಭಾಗಗಳಿವೆ. 80 ವಿದ್ಯಾರ್ಥಿಗಳು ಇದ್ದಾರೆ. ಗೋದಾಮಿಗೆ ತಿಂಗಳ ಬಾಡಿಗೆ ರೂಪದಲ್ಲಿ ₹32,990 ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಶೌಚಾಲಯ ಸೌಲಭ್ಯ ಇಲ್ಲ.
‘ಸರ್ಕಾರದ ಅನುದಾನ ಪಡೆದ ಫಲಾನುಭವಿಗಳಿಗಾಗಿ ಮೂರು ತಿಂಗಳ ವಿಶೇಷ ಕೌಶಲ ತರಬೇತಿ ನಡೆಸಲು ಅವಕಾಶ ಇದೆ. ಆದರೆ ಕಟ್ಟಡವಿಲ್ಲದೇ ಈ ತರಬೇತಿಗಳೂ ನಡೆಯುತ್ತಿಲ್ಲ. ಬೇಡಿಕೆ ಇರುವ ಕೋರ್ಸ್ಗಳಾದ ಡೀಸೆಲ್ ಮೆಕ್ಯಾನಿಕ್, ಕಂಪ್ಯೂಟರ್, 3 ರಿಂದ 6 ತಿಂಗಳ ಮೋಟಾರ್ ರಿವೈಂಡಿಂಗ್, ಫ್ಯಾಷನ್ ಡಿಸೈನಿಂಗ್, ಟೈಲರಿಂಗ್, ಹೊಸ ಹೊಸ ಕೋರ್ಸ್ ಆರಂಭಿಸಲು ಸಾಧ್ಯವಾಗುತ್ತಿಲ್ಲ’ ಎಂಬುದು ಸಿಬ್ಬಂದಿ ಅಳಲು.
ರಾಷ್ಟ್ರೀಯ ಹೆದ್ದಾರಿ–150ಎ ಸಮೀಪದ 64 ಹಳೇಕೋಟೆ ಗ್ರಾಮದಲ್ಲಿ 3 ಎಕರೆ ಜಮೀನನ್ನು ಸಿರುಗುಪ್ಪ ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜು ಕಟ್ಟಡಕ್ಕಾಗಿ 2018ರಲ್ಲಿ ಹಸ್ತಾಂತರಿಸಲಾಗಿದೆ. ಎರಡು ವರ್ಷಗಳಲ್ಲಿ ಕಟ್ಟಡ ನಿರ್ಮಿಸಬೇಕು ಎಂಬ ಷರತ್ತು ವಿಧಿಸಲಾಗಿದ್ದರೂ ಈವರೆಗೆ ಭೂಮಿ ಬಳಕೆ ಆಗಿಲ್ಲ.
ಕಾಲೇಜಿಗೆ 3 ಎಕರೆ ಭೂಮಿ ಮಂಜೂರಾಗಿದೆ. ಆದರೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗಿಲ್ಲ. ಅನುದಾನಕ್ಕಾಗಿ ಕೋರಲಾಗಿದೆ–ವಿ. ತಿಮ್ಮರಾಜು, ಪ್ರಾಂಶುಪಾಲ ಐಟಿಐ ಕಾಲೇಜು ಸಿರುಗುಪ್ಪ
ಕಟ್ಟಡ ನಿರ್ಮಾಣಕ್ಕಾಗಿ ₹5 ಕೋಟಿಯ ಪ್ರಸ್ತಾವವನ್ನು ಕೇಂದ್ರ ಕಚೇರಿಗೆ ಸಲ್ಲಿಸಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ನಿರ್ಮಿಸಲು ಬಳ್ಳಾರಿ ಜಿಲ್ಲಾಧಿಕಾರಿಗೆ ವಿನಂತಿಸಲಾಗಿದೆ–ರಾಜೇಶ್ ಭವಾಗಿ, ಜಂಟಿ ನಿರ್ದೇಶಕ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಕಲಬುರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.