
ಸಿರುಗುಪ್ಪ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಸಿದಾಗ ಬೂತ್ ಮಟ್ಟದಲ್ಲಿ ಅಕ್ರಮ ಮತಗಳನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಹೇಳಿದರು.
ನಗರದ ಅಭಯಾಂಜನೇಯ ದೇವಸ್ಥಾನದ ಸಭಾಂಗಣದಲ್ಲಿ ಬಿಜೆಪಿ ತಾಲ್ಲೂಕು ಘಟಕದಿಂದ ಬೂತ್ ಮಟ್ಟದ ಅಧ್ಯಕ್ಷರಿಗೆ ಎಸ್.ಐ.ಆರ್. ಮತಪಟ್ಟಿ ಪರಿಷ್ಕೃತ ಮಾರ್ಗದರ್ಶಿ ಹಾಗೂ ವಿಬಿ–ಜಿರಾಮ್ಜಿ ಯೋಜನೆಯ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಬ್ಬ ಮತದಾರ ಎರಡು ಕಡೆ ಮತದಾನದ ಗುರುತಿನ ಪತ್ರ ಹೊಂದಿದ್ದು, ಮೃತಪಟ್ಟ ಮತದಾರರ ಹೆಸರಿನಲ್ಲಿ ಬೇರೊಬ್ಬರು ಮತ ಚಲಾಯಿಸುವುದನ್ನು ಬೂತ್ ಮಟ್ಟದಲ್ಲಿ ತಡೆಯಬೇಕು. ಒಂದು ಮತ ಅಂತರದಿಂದ ಸೋತಿರುವುದು ಮತ್ತು ಗೆದ್ದಿರುವ ಉದಾಹರಣೆಗಳು ಅನೇಕ ಇವೆ. ಒಬ್ಬ ಮತದಾರ ಒಂದು ಕಡೆ ಮಾತ್ರ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶದ ಕಾರ್ಯಕರ್ತರು ಮತದಾರರ ಪಟ್ಟಿ ಪರಿಶೀಲಿಸಿ ಚುನಾವಣೆ ಅಧಿಕಾರಿಗಳಿಗೆ ಮಾಹಿತಿ ಒದಗಿಸಬೇಕು’ ಎಂದು ಹೇಳಿದರು.
ಪಿ.ಪಿ.ಟಿ ಮೂಲಕ ಎಸ್.ಐ.ಆರ್. ಕುರಿತು ಸಮಗ್ರ ಮಾಹಿತಿಯನ್ನು ರಾಯಚೂರಿನ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಗುರೂಜೀ ನೀಡಿದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅನಿಲ ಕುಮಾರ ಮೋಕ, ಉಪಾಧ್ಯಕ್ಷ ಶಂಕ್ರಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಮಲ್ಲಿಕಾರ್ಜುನ ಸ್ವಾಮಿ, ಮುಖಂಡರಾದ ಶಾಂತ ಕುಮಾರ್ ಸ್ವಾಮಿ, ಟಿ.ಧರಪ್ಪ ನಾಯಕ, ಚಾಗಿಸುಬ್ಬಯ್ಯ, ರಾಧ ಧರಪ್ಪ, ಬೆಳಗಲ್ ಬಸವರಾಜ, ಗಂಗಾಧರ, ಮಾರೇಶ, ಶಿವರಾಮಗೌಡ, ಶಿವಪ್ಪ, ಪಿಡ್ಡಯ್ಯ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.