ADVERTISEMENT

ಫಲಾನುಭವಿಗಳಿಗೆ ನಿವೇಶನ ಕೊಡಿಸಿ: ಕಾರ್ಮಿಕರ ಸಂಘ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 13:42 IST
Last Updated 13 ಸೆಪ್ಟೆಂಬರ್ 2021, 13:42 IST
ತಾಲ್ಲೂಕು ದ್ವಿಚಕ್ರ ವಾಹನ ರಿಪೇರಿ ಕಾರ್ಮಿಕರ ಸಂಘದವರು ಸೋಮವಾರ ಹೊಸಪೇಟೆಯಲ್ಲಿ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು
ತಾಲ್ಲೂಕು ದ್ವಿಚಕ್ರ ವಾಹನ ರಿಪೇರಿ ಕಾರ್ಮಿಕರ ಸಂಘದವರು ಸೋಮವಾರ ಹೊಸಪೇಟೆಯಲ್ಲಿ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ನಗರದ ಜಂಬುನಾಥ ರಸ್ತೆಯ ಆಯಿಲ್‌ ಫ್ಯಾಕ್ಟರಿ ಹಿಂಭಾಗ 2005ರಲ್ಲಿ ಮಂಜೂರಾದ ನಿವೇಶನಗಳನ್ನು ನೈಜ ಫಲಾನುಭವಿಗಳಿಗೆ ಕೊಡಿಸಬೇಕು ಎಂದು ತಾಲ್ಲೂಕು ದ್ವಿಚಕ್ರ ವಾಹನ ರಿಪೇರಿ ಕಾರ್ಮಿಕರ ಸಂಘ ಆಗ್ರಹಿಸಿದೆ.

ಈ ಸಂಬಂಧ ಸಂಘದವರು ಸೋಮವಾರ ನಗರದಲ್ಲಿ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ಕಾರ್ಮಿಕರು, ನಿರ್ಗತಿಕರಿಗೆ 2005ರಲ್ಲಿ ಅಂದಿನ ಶಾಸಕ ಎಚ್‌.ಆರ್‌. ಗವಿಯಪ್ಪನವರು ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ನಿವೇಶನಗಳನ್ನು ಮಂಜೂರು ಮಾಡಿಸಿದ್ದರು. 2012ರಲ್ಲಿ ಅಂದಿನ ಶಾಸಕ ಆನಂದ್‌ ಸಿಂಗ್‌ ಅವರು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿದ್ದರು. ಬಳಿಕ ನಗರಸಭೆಯು ನಿವೇಶನಗಳನ್ನು ಅಳತೆ ಮಾಡಿ, ಕಲ್ಲಿನ ಮೇಲೆ ನಿವೇಶನಗಳ ಸಂಖ್ಯೆ ಬರೆಸಿ, ಒಳಚರಂಡಿ ನಿರ್ಮಿಸಿತು. ಆದರೆ, ಈಗ ಕೆಲವರು ಆ ಬಂಡೆಗಳನ್ನು ಕಿತ್ತು ಹಾಕಿ, ಅಕ್ರಮವಾಗಿ ಅಲ್ಲಿ ವಾಸವಾಗಿದ್ದಾರೆ ಎಂದು ಮನವಿಯಲ್ಲಿ ದೂರಿದರು.

ADVERTISEMENT

ಶೆಡ್‌ ಹಾಗೂ ತಾತ್ಕಾಲಿಕವಾಗಿ ಮನೆಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಕೂಡಲೇ ಅವರನ್ನು ತಡೆದು, ಪುನಃ ಸರ್ವೇ ನಡೆಸಿ, ನಿಜವಾದ ಫಲಾನುಭವಿಗಳಿಗೆ ನಿವೇಶನ ಕೊಡಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.