ಬಳ್ಳಾರಿ: ‘ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುವೆ’ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ತಿಳಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಂಗಿ ಚೆನ್ನಪ್ಪ ಅವರ ಬಳಿಕ ಯಾರೂ ಅಧ್ಯಕ್ಷರಾಗಿಲ್ಲ. ಮಧ್ಯ ಕರ್ನಾಟಕ ಭಾಗದವರಿಗೂ ಅವಕಾಶ ದೊರಕಿಲ್ಲ. ಪರಿಷತ್ತಿನ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಹಿತಿಯೇ ಆಗಿರಬೇಕಿಲ್ಲ. ಸಾಹಿತ್ಯ, ಸಾಹಿತಿಗಳ ಕುರಿತ ಕಾಳಜಿ, ಆಸಕ್ತಿಯಿಂದ ಬಳ್ಳಾರಿಯಿಂದ ಸ್ಪರ್ಧಿಸಲು ಬಯಸಿರುವೆ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಂದೂವರೆ ತಿಂಗಳ ಅವಧಿಯಲ್ಲಿ ಪರಿಷತ್ತಿನ ಎಲ್ಲಾ ಸದಸ್ಯರನ್ನು ಭೇಟಿಯಾಗಲು ಸಾಧ್ಯವಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಶೇ 90 ರಷ್ಟು ಮತದಾರರನ್ನು ಮುಟ್ಟುವ ವಿಶ್ವಾಸವಿದೆ ಎಂದರು.
ಪರಿಷತ್ತಿನ ಮತದಾರರ ಪೈಕಿ ಸುಮಾರು ಒಂದು ಲಕ್ಷ ಮಂದಿಯೊಂದಿಗೆ ಸಂಪರ್ಕವಿದೆ. ಸುಮಾರು 30 ಸಾವಿರ ಮತದಾರರಲ್ಲಿ ಕೌಟುಂಬಿಕ ಸಂಬಂಧಿಕರಿದ್ದಾರೆ. ಅವರೆಲ್ಲರ ಸಂಪರ್ಕದ ಮೂಲಕವೇ ಗಟ್ಟಿ ಪ್ರಚಾರವನ್ನು ನಡೆಸಲಾಗುವುದು. ಬೀದರಿನಿಂದ ಬೆಂಗಳೂರಿನವರೆಗೂ 31 ಜಿಲ್ಲೆಗಳಲ್ಲಿ ಪ್ರಚಾರ ನಡೆಸಲು ನಮ್ಮ ಬೆಂಬಲಿಗರ ತಂಡಗಳು ಸಜ್ಜಾಗಿವೆ ಎಂದರು.
ಈಗ ಅಧ್ಯಕ್ಷ ಸ್ಥಾನದಲ್ಲಿ ಸ್ಪರ್ಧಿಸಲು ಬಯಸಿ ಕೆಲವು ವರ್ಷಗಳಿಂದಲೇ ಪ್ರಚಾರವನ್ನು ಆರಂಭಿಸಿರುವವರಲ್ಲಿ ಬಹುತೇಕರು ಹಿರಿಯರಿದ್ದಾರೆ. ಯುವಜನರ ಪ್ರತಿನಿಧಿಯಾಗಿ ನಾನು ಸ್ಪರ್ಧಿಸುತ್ತಿರುವೆ ಎಂದು ಹೇಳಿದರು.
ಬೆಂಬಲಿಗರಾದ ಸಿದ್ಮಲ್ ಮಂಜುನಾಥ್, ದುರ್ಗೇಶ್ , ಹನುಮೇಶ್ ಉಪ್ಪಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.