ADVERTISEMENT

ಸಹಕಾರ ಸಂಘಗಳಲ್ಲಿ ಸ್ಥಿರತೆ ಬರಲಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 10:04 IST
Last Updated 16 ಮಾರ್ಚ್ 2021, 10:04 IST
ಹೊಸಪೇಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲಬುರ್ಗಿ ವಿಭಾಗದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಸಿಬ್ಬಂದಿಯ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಸುನೀತಾ ಸಿದ್ರಾಮ್‌ ಮಾತನಾಡಿದರು
ಹೊಸಪೇಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲಬುರ್ಗಿ ವಿಭಾಗದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಸಿಬ್ಬಂದಿಯ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪನಿಬಂಧಕ ಸುನೀತಾ ಸಿದ್ರಾಮ್‌ ಮಾತನಾಡಿದರು   

ವಿಜಯನಗರ (ಹೊಸಪೇಟೆ): ‘ಸಹಕಾರ ಸಂಘಗಳಲ್ಲಿ ಸ್ಥಿರತೆ ಬರುವುದು ಬಹಳ ಅಗತ್ಯ’ ಎಂದು ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕ ಜೆ.ಎಂ. ವೃಷಬೇಂದ್ರಯ್ಯ ಹೇಳಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಬಳ್ಳಾರಿ ಜಿಲ್ಲಾ ಸಹಕಾರ ಯೂನಿಯನ್‌ ಸಹಭಾಗಿತ್ವದಲ್ಲಿ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಕಲಬುರ್ಗಿ ವಿಭಾಗದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಸಿಬ್ಬಂದಿಯ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಗ್ರಾಮೀಣ ಜನರ ಬಗ್ಗೆ ವಾಣಿಜ್ಯ ಬ್ಯಾಂಕುಗಳಿಗೆ ಕಾಳಜಿ ಇಲ್ಲ. ಡಿಸಿಸಿ ಬ್ಯಾಂಕ್‌, ಪಿಕಾರ್ಡ್‌ ಬ್ಯಾಂಕ್‌ ಮೂಲಕ ಜನರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಆದರೆ, ಸಾಲ ವಸೂಲಾತಿಯಲ್ಲಿ ಕೆಲವು ಬ್ಯಾಂಕ್‌ಗಳ ಸಾಧನೆ ಉತ್ತಮವಾಗಿಲ್ಲ’ ಎಂದರು.

ADVERTISEMENT

‘ಸಾಲ ವಸೂಲಾತಿಯೇ ಸಹಕಾರ ಸಂಘಗಳಿಗೆ ಕಾಡುತ್ತಿರುವ ಮುಖ್ಯ ಸಮಸ್ಯೆ. ಕೆಲವೆಡೆ ಸಿಬ್ಬಂದಿ ಕೊರತೆಯೂ ಇದೆ. ದಕ್ಷತೆ ಬಂದರೆ ಎಲ್ಲವೂ ಸರಿ ಹೋಗುತ್ತದೆ. ಸಹಕಾರ ಆಂದೋಲನಕ್ಕೆ ಉತ್ತಮ ಭವಿಷ್ಯವಿದೆ. ಆದರೆ, ನಮ್ಮ ಸಂಸ್ಥೆಗಳು ಬಲಗೊಳ್ಳಬೇಕು’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಹಕಾರ ಸಂಘಗಳ ಉಪನಿಬಂಧಕಿ ಸುನೀತಾ ಸಿದ್ರಾಮ್‌, ‘ದೀರ್ಘಾವಧಿ ಸಾಲ ಕೊಡುವ ಬ್ಯಾಂಕ್‌ ಅಂದರೆ ಪಿಎಲ್‌ಡಿ. ಆದರೆ, ಬಹುತೇಕ ಪಿಎಲ್‌ಡಿಗಳ ಪರಿಸ್ಥಿತಿ ಶೋಚನೀಯ ಇದೆ. ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದರೆ ಅದರಿಂದ ಹೊರಬರಬಹುದು’ ಎಂದರು.

ಕಾಸ್ಕರ್ಡ್‌ ಬ್ಯಾಂಕ್‌ ಜಿಲ್ಲಾ ವ್ಯವಸ್ಥಾಪಕ ಸಿ. ಮಂಜುನಾಥ, ಸಹಕಾರ ಮಹಾಮಂಡಳದ ನಿರ್ದೇಶಕರಾದ ಬಿ.ಕೆ. ನಾಗರಾಜ, ಕೊಟ್ರೇಶ, ಅಯ್ಯಾಳಿ ಶಂಕ್ರಪ್ಪ, ರವಿಕುಮಾರ ಗೌಳಿಕುಮಾರ, ಸಹಕಾರ ಸಂಘದ ಹೆಚ್ಚುವರಿ ರಜಿಸ್ಟ್ರಾರ್‌ ಎಚ್‌.ವೈ. ಗದ್ದಿನಕೇರಿ, ಶಂಕರ್‌ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.