
ಸಿರುಗುಪ್ಪ: ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ನಿರಂತರ ಅಧ್ಯಯನ, ಪರಿಶ್ರಮ ಪಡಬೇಕು. ಅದರಿಂದ ಯಶಸ್ಸು ಸಾಧ್ಯ ಎಂದು ವಿಶ್ವಜ್ಯೋತಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಆರ್.ಬಸವಲಿಂಗಪ್ಪ ಹೇಳಿದರು.
ನಗರದ ವಿಶ್ವಜ್ಯೋತಿ ಪಿಯು ಕಾಲೇಜಿನಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶ್ವಜ್ಯೋತಿ ವಿದ್ಯಾರ್ಥಿ ವೇತನ ಪರೀಕ್ಷೆ 2026 ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಪರೀಕ್ಷೆ ಹತ್ತಿರ ಬಂದಾಗ ಅಧ್ಯಯನ ಮಾಡುವುದರಿಂದ ಎಲ್ಲಾ ವಿಷಯಗಳು ಒಮ್ಮೆಲೆ ಅರ್ಥವಾಗುವುದು ಕಷ್ಟವಾಗಬಹುದು. ಅದಕ್ಕೆ ವಿದ್ಯಾರ್ಥಿಗಳು ಎಲ್ಲಾ ವಿಷಯಗಳನ್ನು ಮತ್ತು ದಿನದ ಪಾಠವನ್ನು ಈಗಿನಿಂದಲೇ ಅಧ್ಯಯನ ಮಾಡುವುದು ವಾರ್ಷಿಕ ಪರೀಕ್ಷೆಗೆ ಅನುಕೂಲವಾಗಲಿದೆ. ಅಂದಿನ ದಿನದ ಪಾಠವನ್ನು ಅಂದೇ ಓದುವುದನ್ನು ಇಂದಿನಿಂದಲೇ ಆರಂಭ ಮಾಡಿ. ಇದು ವಿದ್ಯಾರ್ಥಿಗಳಿಗೆ ಆ ಪಾಠವನ್ನು ಪರಿಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಮತ್ತು ಗ್ರಹಿಸಿಕೊಳ್ಳಲು ಅನುಕೂಲವಾಗುತ್ತದೆ. ಇದರಿಂದ ಉತ್ತಮ ಫಲಿತಾಂಶ ಸಾಧಿಸಬಹುದು ಎಂದರು.
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ90ಕ್ಕಿಂತ ಅಧಿಕ ಅಂಕಗಳು ಪಡೆದವರಿಗೆ ಶೇ 100ರಷ್ಟು ಶುಲ್ಕ ರಿಯಾಯಿತಿ, ಶೇ 85 ರಿಂದ ಶೇ 90 ಅಂಕ ಪಡೆದವರಿಗೆ ಶೇ 75 ಶುಲ್ಕ ರಿಯಾಯಿತಿ, ಶೇ 80 ರಿಂದ ಶೇ 85 ಅಂಕ ಪಡೆದವರಿಗೆ ಶೇ 50 ಶುಲ್ಕ ರಿಯಾಯಿತಿ, ಶೇ 75 ರಿಂದ ಶೇ 80 ಅಂಕ ಪಡೆದವರಿಗೆ ಶೇ 25 ಶುಲ್ಕ ರಿಯಾಯಿತಿಯನ್ನು ವಿಶ್ವಜ್ಯೋತಿ ವಿದ್ಯಾರ್ಥಿ ವೇತನ ಪರೀಕ್ಷೆ ಮೂಲಕ ನೀಡಲಾಗುತ್ತದೆ ಎಂದು ತಿಳಿಸಿದರು.
ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಎಸ್.ಎಸ್.ಎಲ್.ಸಿ 30 ಶಾಲೆಗಳ 660 ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಭರತನಾಟ್ಯ ಮತ್ತು ದೇಶಭಕ್ತಿ ಗೀತೆಗಳಿಗೆ ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸಿದರು. ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಯಿತು.
ವಿಶ್ವಜ್ಯೋತಿ ಎಜುಕೇಷನಲ್ ಟ್ರಸ್ಟ್ನ ಕಾರ್ಯದರ್ಶಿ ವಿವೇಕ್ ಆನಂದ, ಪ್ರಾಂಶುಪಾಲ ಎಚ್.ಎಂ. ಶಿವಪ್ರಕಾಶ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.