
ತೆಕ್ಕಲಕೋಟೆ : ಇಲ್ಲಿನ ಗೌಡ್ರಮೂಲೆ ಬೆಟ್ಟ ಪ್ರದೇಶದಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳಕ್ಕೆ ಸಂಗನಕಲ್ಲು ವಸ್ತು ಸಂಗ್ರಹಾಲಯದ ನಿರ್ದೇಶಕರು ಸೇರಿದಂತೆ ರಾಜಕಾರಣಿಗಳು, ಉಪನ್ಯಾಸಕರು, ಶಿಕ್ಷಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿದರು.
ತೆಕ್ಕಲಕೋಟೆಯಲ್ಲಿ ಉತ್ಖನನ ಕಾರ್ಯ ಕೈಗೊಳ್ಳಲು ಕಾರಣ ಏನು ಎಂಬ ‘ಪ್ರಜಾವಾಣಿ’ ಪ್ರಶ್ನೆಗೆ ಉತ್ತರಿಸಿರುವ ಉತ್ಖನನ ಕಾರ್ಯದ ಸಹ ನಿರ್ದೇಶಕಿ ನಮಿತಾ ಎಸ್. ಸುಗಂಧಿ ‘ಆರಂಭದಲ್ಲಿ ನಿಟ್ಟೂರು ಹಾಗೂ ಉಡೇಗೋಳದ ಅಶೋಕನ ಶಿಲಾಶಾಸನಗಳ ಅಧ್ಯಯನ ಮಾಡಬೇಕು ಎಂದು ಬಂದಿದ್ದೆ. ಆ ಸಂದರ್ಭದಲ್ಲಿ ಈ ಬೆಟ್ಟಗುಡ್ಡಗಳಲ್ಲಿ ಕಂಡುಬಂದ ಪ್ರಾಗೈತಿಹಾಸಿಕ ಕುರುಹುಗಳು ಹಾಗೂ ಎಂ.ಎಸ್ ನಾಗರಾಜರಾವ್ ಅವರು 1964ರಲ್ಲಿ ಕೈಗೊಂಡ ಉತ್ಖನನವು ನನ್ನ ಗಮನ ಸೆಳೆಯಿತು. ಇದರಿಂದ ಪ್ರೇರಣೆ ಹೊಂದಿ ಉತ್ಖನನ ಕಾರ್ಯಕ್ಕೆ ಇಳಿದಿದ್ದೇನೆ’ ಎಂದು ತಿಳಿಸಿದರು.
‘2019ರಲ್ಲಿ ಪ್ರಥಮ ಬಾರಿಗೆ ಉತ್ಖನನ ಕಾರ್ಯ ಕೈಗೊಂಡಿದ್ದು, 2022ರಲ್ಲಿ ಸಂಶೋಧನಾ ಕಾರ್ಯ ಮಾಡಿದ್ದೇನೆ. ಇದರ ಆಧಾರದ ಮೇಲೆ ಅಮೇರಿಕಾದಲ್ಲಿ ‘ಮಾನವ ಮತ್ತು ಪರಿಸರ’ ಕುರಿತ ಪ್ರಬಂಧ ಮಂಡನೆ ಮಾಡಲಾಗಿದೆ’ ಎಂದರು.
ಬಳ್ಳಾರಿಯ ಸಂಗನಕಲ್ಲಿನ ರಾಬರ್ಟ್ ಬ್ರೂಸ್ ಫೂಟ್ ಸಂಗ್ರಹಾಲಯದ ನಿರ್ದೇಶಕ ಸಂತೋಷ್ ಮಾರ್ಟಿನ್ ‘ಕಳೆದ ಎರಡು ವರ್ಷಗಳಿಂದ ನಾನು ತೆಕ್ಕಲಕೋಟೆಗೆ ಭೇಟಿ ನೀಡುತ್ತಿದ್ದು ಇದು ಶಿಲಾಯುಗ ಹಾಗೂ ನವಶಿಲಾಯುಗದ ಬೃಹತ್ ನೆಲೆಯಾಗಿದೆ’ ಎಂದು ಹೇಳಿದರು.
‘ನಮಿತಾ ಅವರ ಪ್ರಥಮ ಹಂತದ ಅಧ್ಯಯನದಲ್ಲಿ ಬೃಹತ್ ಶಿಲಾಯುಧ ಹಾಗೂ ಸಾಕ್ಷ್ಯಾಧಾರಗಳು ದೊರೆತಿದ್ದವು. ಈಗ ಎರಡನೇ ಹಂತದಲ್ಲಿ ಪ್ರಥಮ ಬಾರಿಗೆ ಮಾನವನ ಸಂಪೂರ್ಣ ಅಸ್ಥಿಪಂಜರ ದೊರೆತಿದ್ದು ಇದರ ಕಾಲಮಾನವನ್ನು ಕಾರ್ಬನ್ ಡೇಟಿಂಗ್ ನಂತರ ನಿಖರವಾಗಿ ಹೇಳಬಹುದು’ ಎಂದರು.
‘ತೆಕ್ಕಲಕೋಟೆಯು ಸಂಶೋಧನಾರ್ಥಿಗಳಿಗೆ ಅದ್ಭುತ ಜಾಗವಾಗಿದ್ದು, ಇದನ್ನು ಸಂರಕ್ಷಿಸುವ ಕೆಲಸ ಆಗಬೇಕು. ಇಲ್ಲಿನ ಶವಸಂಸ್ಕಾರ ಪದ್ಧತಿ, ಮಡಕೆಗಳಲ್ಲಿ ಅಸ್ಥಿಗಳನ್ನು ಇಟ್ಟು ಸಂಸ್ಕಾರ ಮಾಡುವ ವಿಶಿಷ್ಟ ವಿಧಾನ, ಬೆಳೆ, ಆಹಾರ ಪದ್ಧತಿ ಇವುಗಳ ಬಗ್ಗೆ ಎಂ.ಎಸ್ ನಾಗರಾಜ್ ರಾವ್ ಅವರ ಉತ್ಖನನ ಕಾರ್ಯದಿಂದ ತಿಳಿದುಬರುತ್ತದೆ. ಅಧ್ಯಯನದ ದೃಷ್ಟಿಯಿಂದ ತೆಕ್ಕಲಕೋಟೆಯು ಪ್ರಮುಖ ನೆಲೆಯಾಗಿದೆ' ಎಂದು ಮ್ಯೂಸಿಯಂನ ಮತ್ತೊಬ್ಬ ನಿರ್ದೇಶಕ ಎಂ. ಅಹಿರಾಜ್ ತಿಳಿಸಿದರು.
‘ಬಳ್ಳಾರಿ ನಗರದಲ್ಲಿರುವ ಸಂಗನಕಲ್ಲು ವಸ್ತು ಸಂಗ್ರಹಾಲಯದಲ್ಲಿ ತೆಕ್ಕಲಕೋಟೆ ಇತಿಹಾಸ ತಿಳಿಸುವ ಪ್ರತ್ಯೇಕ ವಿಭಾಗ ಮಾಡಲಾಗಿದೆ. ಆಸಕ್ತರು ವಸ್ತು ಸಂಗ್ರಹಾಲಯಕ್ಕೂ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆಯಬಹುದು’ ಎಂದು ವಸ್ತು ಸಂಗ್ರಹಾಲಯದ ತಾಂತ್ರಿಕ ಸಹಾಯಕಿ ಹಾಗೂ ಮೇಲ್ವಿಚಾರಕಿ ಗೌರಿ ತಿಳಿಸಿದರು.
ರಾಜಕಾರಣಿಗಳ ದಂಡು: ಉತ್ಖನನ ಸ್ಥಳಕ್ಕೆ ಭೇಟಿ ನೀಡಿದ ಸಿರುಗುಪ್ಪ ಮಾಜಿ ಶಾಸಕ ಎಂ.ಎಸ್ ಸೋಮಲಿಂಗಪ್ಪ ‘ಬಾಲ್ಯದಲ್ಲಿ ತಿರುಗಾಡಿದ ಬೆಟ್ಟ ಪ್ರದೇಶಗಳಾದ ಹಿರೇಅರ್ಲ, ಹುಡೇದಗುಡ್ಡ, ಜಕ್ಕೇರು ಗುಡ್ಡ, ಬಾಳೇತೋಟ, ವಕ್ರಾಣಿಗಳಲ್ಲಿ ಪ್ರಾಗೈತಿಹಾಸಿಕ ಕಾಲದ ಕುರುಹುಗಳು ಇಂದಿಗೂ ಕಂಡುಬರುತ್ತವೆ, ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಐತಿಹಾಸಿಕ ಕುರುಹುಗಳನ್ನು ಸಂರಕ್ಷಿಸಬೇಕು’ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ನರೇಂದ್ರ ಸಿಂಹ ಮಾತನಾಡಿ, ‘ಪ್ರಾಗೈತಿಹಾಸಿಕ ಕಾಲದ ನೆಲೆಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಸುಸಜ್ಜಿತ ವಸ್ತು ಸಂಗ್ರಹಾಲಯ ನಿರ್ಮಿಸಿ ಇಲ್ಲಿ ದೊರೆತಿರುವ ಪಳೆಯುಳಿಕೆಗಳನ್ನು ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ, ಸ್ಥಳೀಯರಿಗೆ ನೋಡಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಸಂರಕ್ಷಿತ ತಾಣ ಮಾಡಲು ಸಿದ್ಧತೆ:
ಡಿಸಿ ಪ್ರಾಗೈತಿಹಾಸಿಕ ಕುರುಹುಗಳು ಸಿಗುತ್ತಿರುವ ತೆಕ್ಕಲಕೋಟೆಯ ನಿರ್ದಿಷ್ಟ ಪ್ರದೇಶವನ್ನು ಸಂರಕ್ಷಿತ ಸ್ಮಾರಕ ಪ್ರದೇಶವಾಗಿ ಘೋಷಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದ್ದು ದಾಖಲೆಗಳನ್ನು ಸಂಗ್ರಹಿಸುತ್ತಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಅಷ್ಟೇ ಅಲ್ಲ ಬಳ್ಳಾರಿಯಲ್ಲಿನ ಪ್ರಾಗೈತಿಹಾಸಿಕ ನೆಲಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.