ಹೊಸಪೇಟೆ: ಗ್ರಾಹಕರ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ನಗರದ ಓರಿಯಂಟಲ್ ಬ್ಯಾಂಕಿನ ಕ್ಯಾಶಿಯರ್ ಗಮನ ಬೇರೆಡೆ ಸೆಳೆದು ಅವರ ಬಳಿಯಿದ್ದ ₹5 ಲಕ್ಷ ನಗದು ತೆಗೆದುಕೊಂಡು ಪರಾರಿಯಾಗಿದ್ದಾನೆ.
‘ಕ್ಯಾಶಿಯರ್ ನಿಕಿತಾ ಅವರು ಕೆಲಸದಲ್ಲಿ ನಿರತರಾಗಿದ್ದರು. ಅವರ ತೆರೆದ ಚೇಂಬರ್ಗೆ ಹೋಗಿ, ಅವರೊಂದಿಗೆ ಮಾತನಾಡುತ್ತ, ಬೇರೆಡೆ ಗಮನ ಸೆಳೆದು ಅಲ್ಲಿದ್ದ ₹5 ಲಕ್ಷ ನಗದು ತೆಗೆದುಕೊಂಡು ಪರಾರಿಯಾಗಿದ್ದಾನೆ. ಹಣ ತೆಗೆದುಕೊಂಡು ಹೋಗುವಾಗ ಕ್ಯಾಶಿಯರ್ ಸೇರಿದಂತೆ ಅಲ್ಲಿದ್ದವರು ಕೂಗುವಷ್ಟರಲ್ಲಿ ಆತ ತಪ್ಪಿಸಿಕೊಂಡಿದ್ದಾನೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘ಬ್ಯಾಂಕಿನ ಶಾಖೆ ವ್ಯವಸ್ಥಾಪಕ ಧನಂಜಯ ಅವರು ಕೊಟ್ಟಿರುವ ದೂರಿನ ಮೇರೆಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿ.ಸಿ.ಟಿ.ವಿ. ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗುತ್ತಿದೆ. ಅದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ರಾಷ್ಟ್ರೀಯ ಬ್ಯಾಂಕುಗಳಂತೆ ಸುರಕ್ಷತಾ ಕ್ರಮಗಳನ್ನು ಓರಿಯಂಟಲ್ ಬ್ಯಾಂಕಿನವರು ತೆಗೆದುಕೊಳ್ಳದ ಕಾರಣ ಈ ರೀತಿ ಆಗಿದೆ’ ಎಂದು ಅಧಿಕಾರಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.