ಕೂಡ್ಲಿಗಿ: 15 ವರ್ಷಗಳ ನಂತರ ಪಟ್ಟಣದ ಗ್ರಾಮ ದೇವತೆ ಊರಮ್ಮ ದೇವಿ ರಥೋತ್ಸವ ಗುರುವಾರ ಸಂಜೆ ಅದ್ದೂರಿಯಾಗಿ ನಡೆಯಿತು.
ಮಧ್ಯಾಹ್ನ ರಥದ ಗಾಲಿ ತೊಳೆದು, ರಥಕ್ಕೆ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಲಾಯಿತು. ಸಂಜೆ 5 ಕ್ಕೆ ಅಲಂಕರಿಸಲ್ಪಟ್ಟ ದೇವತೆಯ ಮೂರ್ತಿಯನ್ನು ದೇವಸ್ಥಾನದ ಬಳಿಯಿಂದ ಮೆರವಣಿಗೆ ಮೂಲಕ ತೆಗೆದುಕೊಂಡು ಊರ ಬಾಗಿಲ ಹಾದು, ಕೊತ್ತಲಾಂಜನೇಯಸ್ವಾಮಿಗೆ ನಮಿಸಿ ರಥದ ಬಳಿ ತರಲಾಯಿತು. ನಂತರ ದೇವಿಯ ಮೂರ್ತಿಯನ್ನು ಬಾಳೆ ಗಿಡ, ತೆಂಗಿನ ಗರಿ, ಹೂವಿನ ಹಾರಗಳಿಂದ ಅಲಕಂರಿಸಲ್ಪಟ್ಟ ರಥದ ಮುಂಭಾಗ ಪ್ರತಿಷ್ಠಾಪನೆ ಮಾಡಲಾಯಿತು.
ಮಹಾ ಮಂಗಳಾರತಿ ಮಾಡಿ, 6ಕ್ಕೆ ಸರಿಯಾಗಿ ರಥ ಮುಂದೆ ಸಾಗುತ್ತಿದ್ದಂತೆ ನೆರೆದಿದ್ದ ಭಕ್ತರು ಜಯ ಘೋಷಗಳನ್ನು ಕೂಗುತ್ತ ರಥವನ್ನು ಮದಕರಿ ವೃತ್ತ, ಅಂಜನೇಯ ಪಾದಗಟ್ಟೆ, ಅಂಬೇಡ್ಕರ್ ವೃತ್ತ ಹಾದು ಗುಡೇಕೋಟೆ ರಸ್ತೆಯ ಮೂಲಕ ಬಂದು ಊರಮ್ಮ ಪಾದಗಟ್ಟೆ ಬಳಿ ತಂದು ನಿಲ್ಲಿಸಿದರು. ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.
ಪಟ್ಟಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು. ಇಡೀ ಕಾರ್ಯಕ್ರಮಕ್ಕೆ ವಿವಿಧ ವಾದ್ಯ ವೃಂದಗಳು ಮೆರಗು ನೀಡಿದವು. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಡಿಸಿದ ಬಾಣ ಬಿರುಸು ಜನರನ್ನು ಅಕರ್ಷಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.