ADVERTISEMENT

ಸಾಹಿತ್ಯದಲ್ಲಿ ಎಲ್ಲರೂ ಸೇರಬೇಕು: ವೆಂಕಟಗಿರಿ ದಳವಾಯಿ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 2:14 IST
Last Updated 19 ಫೆಬ್ರುವರಿ 2026, 2:14 IST
ವೆಂಕಟಗಿರಿ ದಳವಾಯಿ
ವೆಂಕಟಗಿರಿ ದಳವಾಯಿ   

ಬಳ್ಳಾರಿ: ‘ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಬೇಕಾದ ವರ್ಗ ಇನ್ನೂ ಸಾಹಿತ್ಯದಾಚೆಗೇ ಉಳಿದುಕೊಂಡಿದೆ. ಅವುಗಳು  ಸಾಹಿತ್ಯದೊಳಗೆ ಬರಬೇಕಾಗಿದೆ. ಸಾಹಿತ್ಯ ಎಲ್ಲರನ್ನೂ ಒಳ್ಳಗೊಳ್ಳಬೇಕಾಗಿದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ವಿಭಾಗದ ಮುಖ್ಯಸ್ಥ ವೆಂಕಟಗಿರಿ ದಳವಾಯಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕ ಹಾಗೂ ‘ಪಲ್ಲವ ಪ್ರಕಾಶನ’ ನಗರದ ಕನ್ನಡ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ‘ಹೊಸ ಓದು’ ಮಾಲಿಕೆಯಲ್ಲಿ ಮಹಾಂತೇಶ್ ನವಲಕಲ್ ಅವರ ‘ಬುದ್ಧ ಗಂಟೆಯ ಸದ್ದು’ ಕಥಾ ಸಂಕಲನದ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು. 

‘ಡಾಕ್ಟರರು, ದಾದಿಯರು, ಶವಪರೀಕ್ಷೆ ಮಾಡುವವರು, ಶಿಕ್ಷಕರು, ಮಹಿಳೆಯರು ಸಾಹಿತ್ಯದಲ್ಲಿ ಪ್ರವೇಶಿಸಬೇಕಾಗಿದೆ. ಜಾಗತೀಕರಣದ ಭೂತದಿಂದಾಗಿ ರೈತರ ಮೇಲಾಗುವ ದುಷ್ಪರಿಣಾಮ ಕುರಿತು ಪರಕೀಯ ಪ್ರಜ್ಞೆ ನಮ್ಮನ್ನು ಕಾಡುತ್ತಿದೆ. ಈ ವಿನಾಶ ತಡೆಯಲು ಹೇಗೆ ಪ್ರಯತ್ನಿಸಬೇಕು ಎಂಬುದನ್ನು ‘ಬುದ್ದ ಗಂಟೆಯ ಸದ್ದು’ ಕಥೆಗಾರ ನಮಗೆ ಹೇಳುತ್ತಾರೆ’ ಎಂದರು.

ADVERTISEMENT

ಪಲ್ಲವ ಪ್ರಕಾಶನದ ಕೆ.ವೆಂಕಟೇಶ್ ‘ಬುದ್ದ ಗಂಟೆಯ ಸದ್ದು’ ‘ಪ್ರಜಾವಾಣಿ’ಯ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕಥೆ’ ಎಂದು ಅಭಿಮಾನದಿಂದ ನುಡಿದರು.

ವೈದ್ಯೆ ಎಚ್‌. ಪುಷ್ಪಲತಾ ಮಾತನಾಡಿ, ‘ಮಾನವನು ಪ್ರಾಣಿಗಳಿಗಿಂತ ನಿಕೃಷ್ಟ ಬದುಕು ನಡೆಸುತ್ತಿದ್ದಾನೆ. ಅವನ ಅತಿಯಾದ ಬುದ್ಧಿವಂತಿಕೆ ಶಾಪವಾಗಿ ಪರಿಣಮಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಕವಯಿತ್ರಿ ಕವಿತಾ ವಿರೂಪಾಕ್ಷ ಮಾತನಾಡಿ, ‘ಭಾಷೆ, ಆರೋಗ್ಯ, ಸಂಸ್ಕೃತಿ ವ್ಯಾಪಾರೀಕರಣವಾಗುತ್ತಿವೆ. ಇಂತಹ ಸಮಯದಲ್ಲಿ ಕಥೆಗಳ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಕಥೆಗಾರ ಮಹಾಂತೇಶ್ ನವಲಕಲ್ ಮಾಡಿರುವುದು ಆಸಕ್ತಿಕರ’ ಎಂದರು.

‘ಬುದ್ದ ಗಂಟೆಯ ಸದ್ದು’ ಕಥೆಗಳಲ್ಲಿ ಬುದ್ಧ, ಬಸವ, ಅಂಬೇಡ್ಕರ್ ತತ್ವಗಳು ಕಾವ್ಯಾತ್ಮಕವಾಗಿ ಮೇಳೈಸಿವೆ’ ಎಂದು ಉಪನ್ಯಾಸಕ ಆರನಕಟ್ಟೆ ರಂಗನಾಥ ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಅಖಂಡ ಬಳ್ಳಾರಿ ಜಿಲ್ಲೆಯ ಅಧ್ಯಕ್ಷ ನಿಷ್ಠಿರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಯಚೂರಿನ ಕಥೆಗಾರ ಮಹಾಂತೇಶ್ ನವಲಕಲ್, ಉಪನ್ಯಾಸಕ ದಸ್ತಗೀರಸಾಬ್ ದಿನ್ನಿ, ಹೊಸ ಓದು ಸರಣಿ ಸಂಚಾಲಕ ಕೆ. ಶಿವಲಿಂಗಪ್ಪ ಹಂದಿಹಾಳು, ಕಥೆಗಾರ ವೀರೇಂದ್ರ ರಾವಿಹಾಳ್, ಕವಿ, ಕಥೆಗಾರ ಚಿದಾನಂದ ಸಾಲಿ, ಅಬ್ದುಲ್ ಹೈ ತೋರಣಗಲ್ಲು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.