ADVERTISEMENT

ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 6:21 IST
Last Updated 8 ಜುಲೈ 2025, 6:21 IST
ಸಂಡೂರು ತಾಲ್ಲೂಕಿನ ವಡ್ಡು ಗ್ರಾಮದ ಪರಿಶಿಷ್ಟರ ಕಾಲೊನಿಗೆ ಸೋಮವಾರ ಗ್ರಾಮ ಪಂಚಾಯಿತಿ ಪಿಡಿಒ, ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿದರು
ಸಂಡೂರು ತಾಲ್ಲೂಕಿನ ವಡ್ಡು ಗ್ರಾಮದ ಪರಿಶಿಷ್ಟರ ಕಾಲೊನಿಗೆ ಸೋಮವಾರ ಗ್ರಾಮ ಪಂಚಾಯಿತಿ ಪಿಡಿಒ, ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿದರು   

ಸಂಡೂರು: ತಾಲ್ಲೂಕಿನ ವಡ್ಡು ಗ್ರಾಮದ ಪರಿಶಿಷ್ಟರ ಕಾಲೊನಿಯ ಸಾರ್ವಜನಿಕ ನಳಗಳಲ್ಲಿ ಭಾನುವಾರ ಕಲುಷಿತ ನೀರು ಪೂರೈಕೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ, ಸಿಬ್ಬಂದಿ ಸೋಮವಾರ ಘಟನಾ ಸ್ಥಳಕ್ಕೆ ತೆರಳಿ, ನೀರಿನ ಟ್ಯಾಂಕ್ ಸ್ವಚ್ಛಗೊಳಿಸಿ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಿದ್ದಾರೆ.

ಪಿಡಿಒ ಎಂ.ಡಿ.ಜುಬೇರ್ ಮಾತನಾಡಿ, ‘ಕಾಲೊನಿಯ ಸಾರ್ವಜನಿಕ ನಳಗಳಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆಯಾದ ಹಿನ್ನೆಲೆಯಲ್ಲಿ ಕಾಲೊನಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ನೀರಿನ ಮೇಲ್ಮಟ್ಟದ ಟ್ಯಾಂಕ್‍ನ್ನು ಸ್ವಚ್ಛಗೊಳಿಸಿ ಸಾರ್ವಜನಿಕ ನಳಗಳ ಮೂಲಕ ಕಾಲೊನಿಯ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಕಾಲರಾ ನಿಯಂತ್ರಣ ತಂಡ ಭೇಟಿ, ಪರಿಶೀಲನೆ: ಕಾಲೊನಿಯ ಸಾರ್ವಜನಿಕ ನಳಗಳಲ್ಲಿ ಭಾನುವಾರ ಕಲುಷಿತ ನೀರು ಪೂರೈಕೆಯಾಗಿದ್ದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳ ತಂಡವು ಕಾಲೊನಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಚರಂಡಿ ಪಕ್ಕದಲ್ಲಿನ ನೀರಿನ ಪೈಪ್ ಲೈನ್ ಹಾದು ಹೋಗಿದ್ದು, ಪೈಪ್ ಲೈನ್ ಒಡೆದು ದುರಸ್ತಿಯಲ್ಲಿರುವುದು ಕಂಡು ಬಂದಿರುತ್ತದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಪೈಪ್ ಲೈನ್ ದುರಸ್ತಿಗೊಳಿಸಿ ಮೇಲ್ಮಟ್ಟದ ಟ್ಯಾಂಕರ್‌ನ್ನು ಸ್ವಚ್ಛ ಗೊಳಿಸಬೇಕು ಎಂದು ಅನುಪಾಲನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಸುಳ್ಳು ಸುದ್ದಿ ಎಂದ ಜಿಲ್ಲಾಡಳಿತ ವರದಿ ಪ್ರಕಟವಾಗುತ್ತಲೇ ಸ್ಥಳಕ್ಕೆ ಭೇಟಿ ನೀಡಿದ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲಿ ಸಮಸ್ಯೆ ಇರುವುದನ್ನು ಗಮನಿಸಿ ಸ್ವಚ್ಛತಾ ಕಾರ್ಯ ನಡೆಸಿ ಮೇಲಧಿಕಾರಿಗಳಿಗೆ ಅನುಪಾಲನಾ ವರದಿ ನೀಡಿದ್ದಾರೆ. ಈ ವರದಿ ‘ಪ್ರಜಾವಾಣಿ’ ಗೆ ಲಭ್ಯವಾಗಿದೆ. ಆದರೂ ಮುಜಗರದಿಂದ ಪಾರಾಗುವ ಪ್ರಯತ್ನ ನಡೆಸಿರುವ ಜಿಲ್ಲಾಡಳಿತ ವರದಿಯನ್ನೇ ಸುಳ್ಳು ಎಂದಿದೆ. ಈ ಮೂಲಕ ಕಲುಷಿತ ನೀರಿನ ಪ್ರಕರಣವನ್ನು ಲಘುವಾಗಿ ಪರಿಗಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.