ADVERTISEMENT

ಸಂಡೂರು: ಪತ್ನಿ ಕೊಲೆ ಮಾಡಿ ಪರಾರಿಯಾದ ಪತಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 2:57 IST
Last Updated 4 ಮಾರ್ಚ್ 2026, 2:57 IST
ಶೈನಾಜ್ ಬೇಗಂ
ಶೈನಾಜ್ ಬೇಗಂ   

ಸಂಡೂರು: ತಾಲ್ಲೂಕಿನ ಸುಶೀಲನಗರ ಗ್ರಾಮದ 2ನೇ ವಾರ್ಡ್‌ನ ಮನೆಯೊಂದರಲ್ಲಿ ಹಾಸಿಗೆಯ ಮೇಲೆ ಮಲಗಿದ್ದ ತನ್ನ ಪತ್ನಿಯ ಮೇಲೆ ಕೊಡಲಿಯಿಂದ ಭೀಕರವಾಗಿ ಹಲ್ಲೆ ನಡೆಸಿ, ಕೊಲೆ ಮಾಡಿದ ಪತಿಯು ಪರಾರಿಯಾದ ಘಟನೆ ಮಂಗಳವಾರ ಬೆಳಗಿನ ಜಾವ ಜರುಗಿದೆ.

ಸುಶೀಲನಗರ ಗ್ರಾಮದ 2ನೇ ವಾರ್ಡ್ ನ ನಿವಾಸಿ ಶೈನಾಜ್ ಬೇಗಂ (36) ಮಲಗಿದ ಸ್ಥಳದಲ್ಲೇ ಮೃತಪಟ್ಟ ದುರ್ದೈವಿಯಾಗಿದ್ದು, ಮೃತಳ ಪತಿ ಆರೋಪಿ ಬಾಷಾಸಾಬ್ ನೂತನ ಮನೆ ಕಟ್ಟುವ ವಿಷಯದಲ್ಲಿ ತನ್ನ ಪತ್ನಿಯಾದ ಶೈನಾಜ್ ಬೇಗಂ ಹತ್ತಿರ ಜಗಳವಾಡಿ ಕೊಡಲಿಯಿಂದ ತಲೆಗೆ ಭಾಗಕ್ಕೆ ಗಂಭೀರವಾಗಿ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದಾನೆ ಎಂದು ಮೃತಳ ಸಹೋದರ ಎಂ.ಹುಸೇನ್ ಬಾಷಾ ದೂರಿನಲ್ಲಿ ತಿಳಿಸಿದ್ದಾನೆ.

ಮೃತಳ ಮಗ ಸೂಫಿಯಾನ್ ನಮಾಜ್ ಗೆ ಹೋಗಿ ಮನೆಗೆ ಬಂದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ತನ್ನ ತಾಯಿಯನ್ನು ಕಂಡು ಗಾಬರಿಯಾಗಿ ತಮ್ಮ ಕುಟುಂಬಸ್ತರಿಗೆ ತಕ್ಷಣ ಮಾಹಿತಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ADVERTISEMENT

ಆರೋಪಿ ಬಾಷಾಸಾಬ್ ಮಂಗಳವಾರ ಬೆಳಗಿನ ಜಾವ ತನ್ನ ಮಗನನ್ನು ಮಸೀದಿಗೆ ನಮಾಜ್ ಮಾಡಲು ಕಳುಹಿಸಿ ಹಾಸಿಗೆಯಲ್ಲಿ ಮಲಗಿದ್ದ ತನ್ನ ಪತ್ನಿಯ ಮೇಲೆ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ.

ನಮ್ಮ ಅಕ್ಕಳೊಂದಿಗೆ ಮಾವನಾದ ಆರೋಪಿ ಬಾಷಾಸಾಬ್ ಹಲವಾರು ಬಾರಿ ಜಗಳ ಮಾಡಿಕೊಂಡಿದ್ದರಿಂದ ನಮ್ಮ ಅಕ್ಕಳನ್ನು ನಮ್ಮ ಮನೆಯಲ್ಲಿ ಕೆಲ ದಿನಗಳ ಕಾಲ ಇರಿಸಿಕೊಂಡಿದ್ದವು ಆದರೆ ನಮ್ಮ ಮಾವನು ಮುಂದಿನ ದಿನಗಳಲ್ಲಿ ಯಾವುದೇ ಜಗಳ, ಗಲಾಟೆ ನಡೆಸುವುದಿಲ್ಲ ನನ್ನ ಪತ್ನಿಯನ್ನು ನನ್ನ ಜೊತೆಗೆ ಕಳಿಸಿಕೊಡಿ ಎಂದು ಹೇಳಿ ನಮ್ಮ ಅಕ್ಕನನ್ನು ಸುಶೀಲಾನಗರ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾನೆ. ಮನೆ ಕಟ್ಟುವ ವಿಚಾರಕ್ಕೆ ಗಲಾಟೆ ಮಾಡಿ ನಮ್ಮ ಅಕ್ಕನನ್ನು ಕೊಲೆ ಮಾಡಿ ಓಡಿಹೋಗಿದ್ದಾನೆ ಎಂದು ಹುಸೇನ್ ಬಾಷಾ ದೂರಿನಲ್ಲಿ ತಿಳಿಸಿದ್ದಾರೆ.

ಹುಸೇನ್ ಬಾಷಾ ನೀಡಿದ ದೂರು ಆಧರಿಸಿ ಸಂಡೂರು ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ. ಆರೋಪಿ ಪರಾರಿಯಾಗಿದ್ದು ಪತ್ತೆಗಾಗಿ ಹುಡುಕಾಟ ನಡೆಸಲಾಗಿದೆ ಎಂದು ಸಂಡೂರು ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.