ADVERTISEMENT

ಮಹಿಳೆ ಸಂಶಯಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 14:20 IST
Last Updated 6 ಸೆಪ್ಟೆಂಬರ್ 2020, 14:20 IST
ಕಂಪ್ಲಿಯಲ್ಲಿ ಮೃತಪಟ್ಟ ಮಹಿಳೆ ಮನೆಗೆ ಹೆಚ್ಚುವರಿ ಎಸ್.ಪಿ ಬಿ.ಎನ್. ಲಾವಣ್ಯ ಭಾನುವಾರ ಭೇಟಿ ನೀಡಿ ಸಂಬಂಧಿಕರೊಂದಿಗೆ ಚರ್ಚಿಸಿದರು
ಕಂಪ್ಲಿಯಲ್ಲಿ ಮೃತಪಟ್ಟ ಮಹಿಳೆ ಮನೆಗೆ ಹೆಚ್ಚುವರಿ ಎಸ್.ಪಿ ಬಿ.ಎನ್. ಲಾವಣ್ಯ ಭಾನುವಾರ ಭೇಟಿ ನೀಡಿ ಸಂಬಂಧಿಕರೊಂದಿಗೆ ಚರ್ಚಿಸಿದರು   

ಕಂಪ್ಲಿ: ಇಲ್ಲಿಯ 11ನೇ ವಾರ್ಡ್ ರಾಮಲಿಂಗೇಶ್ವರ ದೇವಸ್ಥಾನ ಬಳಿಯ ಮನೆಯೊಂದರಲ್ಲಿ ವಾಸಿಸುತ್ತುದ್ದ ಒಂಟಿ ಮಹಿಳೆ ಭಾನುವಾರ ಸಂಶಯಾಸ್ಪದವಾಗಿ ಮೃತಪಟ್ಟಿದ್ದಾರೆ.

ಧನಪಾಲ್ ಶಾರದಮ್ಮ (59) ಮೃತರಾದವರು. ಮನೆ ಕೆಲಸದ ಮಹಿಳೆ ಭಾನುವಾರ ಬೆಳಿಗ್ಗೆ ಮನೆಗೆ ಬಂದಾಗ ತಲೆಯ ಹಿಂಭಾಗಕ್ಕೆ ಪೆಟ್ಟಾಗಿ, ತೀವ್ರ ರಕ್ತಸ್ರಾವವಾಗಿ ಶಾರದಮ್ಮ ಮೃತಪಟ್ಟಿರುವುದನ್ನು ಕಂಡು ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ.

ನಂತರ ಬೆರಳಚ್ಚು ತಜ್ಞರ ತಂಡ, ಶ್ವಾನ ದಳದವರು ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಮಹಿಳೆ ಸಂಬಂಧಿ ಧನಪಾಲ್ ಸುಬ್ರಹ್ಮಣ್ಯ, ‘ಯಾವುದೋ ಉದ್ದೇಶಕ್ಕಾಗಿ ಮಹಿಳೆ ಕೊಲೆಯಾಗಿದೆ’ ಎಂದು ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಿಳೆಯ ಪತಿ ವೇಣುಗೋಪಾಲ ಒಂಬತ್ತು ತಿಂಗಳ ಹಿಂದೆ ಮೃತಪಟ್ಟಿದ್ದಾರೆ. ಅವರಿಗೆ ಮಕ್ಕಳು ಇರಲಿಲ್ಲ. ಶಾರದಮ್ಮ ಮನೆ ಪಕ್ಕದಲ್ಲಿಯೇ ಕಿರಾಣಿ ಅಂಗಡಿ ನಡೆಸುತ್ತಿದ್ದರು.

ಹೆಚ್ಚುವರಿ ಎಸ್.ಪಿ. ಬಿ.ಎನ್. ಲಾವಣ್ಯ ಭೇಟಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮೇಲ್ನೋಟಕ್ಕೆ ಕೊಲೆ ನಡೆದಿರುವ ಸಂಶಯ ಮೂಡುತ್ತದೆ. ಮರಣೋತ್ತರ ಪರೀಕ್ಷೆ, ಬೆರಳಚ್ಚು ತಜ್ಞರ ತಂಡ, ಶ್ವಾನದಳ ತಂಡದವರ ವರದಿ, ತನಿಖಾ ತಂಡದ ಸಂಪೂರ್ಣ ವರದಿ ನಂತರ ನೈಜ ಚಿತ್ರಣ ತಿಳಿಯಲಿದೆ. ಸಿಪಿಐ ನೇತೃತ್ವದಲ್ಲಿ ತನಿಖೆ ನಡೆಯಲಿದೆ’ ಎಂದು ವಿವರಿಸಿದರು.

ಹಂಪಿ ವಿಭಾಗದ ಡಿವೈಎಸ್‍ಪಿ ಎಸ್.ಎಸ್. ಕಾಶಿ, ಸಿಪಿಐ ಡಿ. ಹುಲುಗಪ್ಪ, ಪಿಎಸ್‍ಐಗಳಾದ ಮೌನೇಶ್ ರಾಥೋಡ್, ಟಿ.ಎಲ್. ಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.