ADVERTISEMENT

Womens Day: ಕಿರು ಉದ್ಯಮದಲ್ಲಿ ಯಶಕಂಡ ಶೇಷಾವತಿ

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 8 ಮಾರ್ಚ್ 2024, 5:41 IST
Last Updated 8 ಮಾರ್ಚ್ 2024, 5:41 IST
ಕಂಪ್ಲಿಯ ಇಂದಿರಾ ನಗರದಲ್ಲಿ ಆರ್. ಶೇಷಾವತಿ (ಎಡದಿಂದ ಮೊದಲನೆಯವರು) ಕಿರು ಉದ್ಯಮದಲ್ಲಿ ಸಿದ್ಧಪಡಿಸಿದ ಕೋಡುಬಳೆ ತಿನಿಸನ್ನು ಪ್ಯಾಕೆಟ್‍ನಲ್ಲಿ ಸಂಗ್ರಹಿಸುತ್ತಿರುವುದು
ಕಂಪ್ಲಿಯ ಇಂದಿರಾ ನಗರದಲ್ಲಿ ಆರ್. ಶೇಷಾವತಿ (ಎಡದಿಂದ ಮೊದಲನೆಯವರು) ಕಿರು ಉದ್ಯಮದಲ್ಲಿ ಸಿದ್ಧಪಡಿಸಿದ ಕೋಡುಬಳೆ ತಿನಿಸನ್ನು ಪ್ಯಾಕೆಟ್‍ನಲ್ಲಿ ಸಂಗ್ರಹಿಸುತ್ತಿರುವುದು   

ಕಂಪ್ಲಿ: ಸಾಧನೆಗೆ ಸತತ ಪರಿಶ್ರಮ, ಛಲ ಮುಖ್ಯ. ಸ್ವಂತ ಉದ್ಯಮದಲ್ಲಿ ಸೋಲು, ನಷ್ಟದ ಮಧ್ಯೆ ಛಲ ಬಿಡದೆ ದುಡಿದು ಇದೀಗ ಉತ್ತಮ ಲಾಭ ಗಳಿಸುತ್ತಾ ಸಾಧನೆ ಮಾಡಿ ಮತ್ತೊಬ್ಬರಿಗೆ ಮಾದರಿಯಾಗಿದ್ದಾರೆ ಆರ್. ಶೇಷಾವತಿ.

ಸ್ಥಳೀಯರಾದ ಇವರು, ಈ ಮುಂಚೆ ಕಿರಾಣಿ ಅಂಗಡಿ ಆರಂಭಿಸಿ ನಷ್ಟ ಅನುಭವಿಸಿದ್ದರು. ಬಳಿಕ ಬೇಕರಿ ತಿನಿಸು ತಯಾರಿಕೆ ಕೇಂದ್ರದಲ್ಲಿ ದುಡಿದು ತಮ್ಮದೇ ಆದ ಕುರುಕಲು ತಿನಿಸು ಸಣ್ಣ ಉದ್ಯಮ ಆರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಾ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಪಟ್ಟಣದ ಇಂದಿರಾ ನಗರದ ಬಾಡಿಗೆ ಮನೆಯೊಂದರಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ₹10 ಸಾವಿರ ಬಂಡವಾಳದೊಂದಿಗೆ ಆರಂಭಿಸಿದ ಗೃಹ ಉದ್ಯಮದಲ್ಲಿ ಬಹುತೇಕ ಕುರಕಲು ತಿಂಡಿಗಳನ್ನು ಕೈಯಿಂದಲೇ ತಯಾರಿಸುತ್ತಿದ್ದರು. ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಗುಂಪಿನ ಸಹಾಯದಲ್ಲಿ ಅಗತ್ಯ ಯಂತ್ರೋಪಕರಣ ಖರೀದಿಸಿದರು. ಬಳಿಕ ಈ ಉದ್ಯಮದಲ್ಲಿ ಯಶಸ್ಸು ಕಂಡಿದ್ದು, ಐವರಿಗೆ ಉದ್ಯೋಗ ಕೂಡ ನೀಡಿದ್ದಾರೆ.

ADVERTISEMENT

ಅಕ್ಕಿಹಿಟ್ಟಿನಿಂದ ಕಡ್ಲೆಬೇಳೆ ಕೋಡುಬಳೆ, ಚಕ್ಕುಲಿ, ರಿಂಗ್, ಬುಲೆಟ್ ಮತ್ತು ಶಂಕು ಆಕಾರದ ಕುರಕಲು ತಿಂಡಿಗಳನ್ನು ತಯಾರಿಸುತ್ತಾರೆ. ಇವುಗಳನ್ನು ಕವರ್‌ನಲ್ಲಿ ತುಂಬಿ  250 ಗ್ರಾಂ. ಗೆ ₹25ರಂತೆ ನಿಗದಿಪಡಿಸಿ ಸಗಟು ಮಾರಾಟ ಮಾಡುತ್ತಿದ್ದಾರೆ. ಆಂಧ್ರಪ್ರದೇಶದ ಆದೋನಿ ಭಾಗದವರು ಇಲ್ಲಿಗೆ ಬಂದು ಕುರುಕುಲ ತಿನಿಸು ಖರೀದಿಸುತ್ತಿದ್ದಾರೆ. ಜೊತೆಗೆ ತಾಲ್ಲೂಕಿನಾದ್ಯಾಂತ ಮಾರುಕಟ್ಟೆ ರೂಪಿಸಿಕೊಂಡಿದ್ದಾರೆ.

‘ನನ್ನೊಂದಿಗೆ ಪತಿ ಆರ್. ಶ್ರೀನಿವಾಸ್ ಅವರು ಕುರಕಲು ತಿಂಡಿಗಳನ್ನು ಮಾರ್ಕೆಟಿಂಗ್ ಮಾಡಲು ಸಹಕರಿಸುತ್ತಿದ್ದಾರೆ. ಸದ್ಯ ಬಾಡಿಗೆ ಮನೆಯಲ್ಲಿ ಕಿರು ಉದ್ಯಮ ನಡೆಸುತ್ತಿದ್ದು, ಕಾಯಂ ಕಟ್ಟಡ ಹೊಂದುವ ಬಯಕೆ ಇದೆ. ಜೊತೆಗೆ ಉದ್ಯಮ ವಿಸ್ತರಿಸುವ ಉದ್ದೇಶ ಹೊಂದಿದ್ದೇನೆ’ ಎನ್ನುತ್ತಾರೆ ಶೇಷಾವತಿ.

‘ಇವರ ಉದ್ಯಮ ವಿಸ್ತರಣೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ₹1 ಲಕ್ಷ ಸಾಲ ಮಂಜೂರು ಮಾಡಲಾಗಿದೆ’ ಎಂದು ಬಿ.ಸಿ ಟ್ರಸ್ಟ್ ಕ್ಷೇತ್ರ ಯೋಜನಾಧಿಕಾರಿ ಹಾಲಪ್ಪ ಎಂ.ಎ ತಿಳಿಸಿದ್ದಾರೆ.

ಈ ಕಿರು ಉದ್ಯಮದಲ್ಲಿ ಹೆಚ್ಚಿನ ಲಾಭವೇನು ಕಂಡಿಲ್ಲ. ಆದರೆ, ಸಂಸಾರ ತೂಗಿಸಲು, ಮಗನ ಕಾಲೇಜು ಶಿಕ್ಷಣಕ್ಕೆ ಯಾವುದೇ ಆರ್ಥಿಕ ತೊಂದರೆ ಎದುರಾಗಿಲ್ಲ ಎಂದು ಆರ್. ಶೇಷಾವತಿ ಹರ್ಷದಿಂದ ತಿಳಿಸಿದರು.

‘ನಮಗೆ ಒಂದು ದಿನಕ್ಕೆ ₹190 ಕೂಲಿ ದೊರೆಯುತ್ತಿದ್ದು, ಅದರಿಂದ ಕುಟುಂಬಗಳ ನಿರ್ವಹಣೆಗೆ ಸಹಕಾರಿಯಾಗಿದೆ’ ಎನ್ನುತ್ತಾರೆ ಇಲ್ಲಿ ಕೆಲಸ ಮಾಡುವ ಶಬನಾ, ಲಕ್ಷ್ಮಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.